ಸತ್ಯ ಬಯಲಾಗುವುದು ಮಂಗಳೂರು ಪೊಲೀಸರಿಗೆ ಬೇಡ: ಜನತಾ ನ್ಯಾಯಾಧಿಕರಣ ಆರೋಪ
ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜನರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಮಂಗಳವಾರ ಅಂತ್ಯಗೊಳಿಸಿದ ನ್ಯಾಯಾಧಿಕರಣವು ಮಾಧ್ಯಮಗಳಿಗೆ ವಿವರಗಳನ್ನು ನೀಡಲು ಸುದ್ದಿಗೋಷ್ಠಿಯನ್ನು ಕರೆಯಲು ನಿರ್ಧರಿಸಿತ್ತು. ಆದರೆ ಪೊಲೀಸರ ಒತ್ತಡದಿಂದಾಗಿ ಅದು ಸಾಧ್ಯವಾಗಲಿಲ್ಲ ಈ ಹಿನ್ನೆಲೆಯಲ್ಲಿ ಉದ್ದೇಶಿತ ಸುದ್ದಿಗೋಷ್ಠಿಯನ್ನು ಕೈಬಿಟ್ಟಿದ್ದಾಗಿ ಜನತಾ ನ್ಯಾಯಾಧಿಕರಣದ ಹೇಳಿಕೆಯು ತಿಳಿಸಿದೆ.
ಪೊಲೀಸ್ ಅಧಿಕಾರಿಗಳಿಂದ ಅನುಮತಿಯನ್ನು ಪಡೆದುಕೊಂಡಿದ್ದರೆ ಮಾತ್ರ ಸುದ್ದಿಗೋಷ್ಠಿಗೆ ಸ್ಥಳಾವಕಾಶವನ್ನು ಒದಗಿಸುವುದಾಗಿ ನ್ಯಾಯಾಧಿಕರಣದ ತಂಡವು ಸಂಪರ್ಕಿಸಿದ್ದ ಹೋಟೆಲ್ ಗಳು ತಿಳಿಸಿದ್ದವು. ಕಾನೂನಿನಂತೆ ಯಾರೇ ಆದರೂ ಸುದ್ದಿಗೋಷ್ಠಿಯನ್ನು ನಡೆಸಲು ಪೊಲೀಸ್ ಅನುಮತಿಯ ಅಗತ್ಯವಿಲ್ಲ ಎಂದು ಅದು ತಿಳಿಸಿದೆ.
ಸೋಮವಾರವೂ ಪೊಲೀಸರು ಅಪರೋಕ್ಷವಾಗಿ ನ್ಯಾಯಾಧಿಕರಣದ ಕಲಾಪಗಳಿಗೆ ವ್ಯತ್ಯಯವನ್ನುಂಟು ಮಾಡಿದ್ದರು. ಪೊಲೀಸ್ ಗೋಲಿಬಾರ್ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿರುವುದರಿಂದ ಸಮಾನಾಂತರವಾಗಿ ಇನ್ನೊಂದು ತನಿಖೆಯನ್ನು ನಡೆಸುವಂತಿಲ್ಲ ಎಂದು ಬಂದರು ಠಾಣಾ ಪೊಲೀಸರು ನ್ಯಾಯಾಧಿಕರಣ ಕಲಾಪಗಳ ಸಂಘಟಕರಿಗೆ ನೋಟೀಸನ್ನೂ ಜಾರಿ ಮಾಡಿದ್ದರು. ಸೋಮವಾರ ನಗರದ ಸೂರ್ಯ ಹೋಟೆಲ್ನಲ್ಲಿ ನಡೆಯುತ್ತಿದ್ದ ಕಲಾಪಗಳಿಗೆ ಒಂದು ಗಂಟೆ ಕಾಲ ಅಡ್ಡಿಯೂ ಆಗಿತ್ತು ಎಂದು ತಿಳಿಸಿರುವ ಹೇಳಿಕೆಯು, ಸಾರ್ವಜನಿಕರೆದುರು ಸತ್ಯ ಬಯಲಾಗದಂತೆ ನೋಡಿಕೊಳ್ಳುವುದು ಪೊಲೀಸರ ಪದೇಪದೇ ಹಸ್ತಕ್ಷೇಪಗಳ ಉದ್ದೇಶವಾಗಿತ್ತು ಎಂದು ಹೇಳಿದೆ.
ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ವಿ.ಗೋಪಾಲ ಗೌಡ ನೇತೃತ್ವದ ಜನತಾ ನ್ಯಾಯಾಧಿಕರಣದ ತಂಡವು ಮಂಗಳವಾರ ನಗರದ ಹೈಲ್ಯಾಂಡ್ ಮತ್ತು ಯೂನಿಟಿ ಆಸ್ಪತ್ರೆಗಳಿಗೆ ತೆರಳಿ ಡಿಸೆಂಬರ್ 19ರಂದು ನಡೆ ಗಲಭೆಯ ಸಂದರ್ಭದ ಗಾಯಾಳುಗಳನ್ನು ಭೇಟಿ ಮಾಡಿತು. ತಂಡವು ಡಿ.19ರಂದು ತೀವ್ರ ಗಲಭೆ ಪೀಡಿತವಾಗಿದ್ದ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿತು.