ಒಮಾನ್ ದೊರೆ ಗೌರವಾರ್ಥ ಜ.13ರಂದು ಶೋಕಾಚರಣೆ ಘೋಷಿಸಿದ ಭಾರತ ಸರಕಾರ
Update: 2020-01-12 15:09 IST
ಹೊಸದಿಲ್ಲಿ: ಒಮಾನ್ ನ ದೊರೆ ಸುಲ್ತಾನ್ ಖಬೂಸ್ ಬಿನ್ ಸೈದ್ ಅಲ್ ಸೈದ್ ಅವರ ನಿಧನದ ಹಿನ್ನೆಲೆಯಲ್ಲಿ ಭಾರತ ಸರಕಾರ ಸೋಮವಾರ ಒಂದು ದಿನದ ಶೋಕಾಚರಣೆ ಘೋಷಿಸಿದೆ. ಒಮಾನ್ ನ ದೊರೆ ಜನವರಿ 10ರಂದು ತಮ್ಮ 79ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು.
"ಅವರಿಗೆ ಗೌರವಾರ್ಥವಾಗಿ ಜನವರಿ 13ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ನಡೆಯುವುದು. ಭಾರತದಾದ್ಯಂತ ರಾಷ್ಟ್ರಧ್ವಜ ಅರ್ಧಮಟ್ಟಕ್ಕೆ ಇಳಿಸಲಾಗುವುದು ಹಾಗೂ ಆ ದಿನ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ'' ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಕುರಿತಂತೆ ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಕಳುಹಿಸಿದೆ.
ಒಮಾನ್ ನ ಸುಲ್ತಾನ್ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶಾಂತಿಯ ದ್ಯೋತಕವಾಗಿದ್ದರು ಎಂದು ಅವರನ್ನು ಬಣ್ಣಿಸಿದ್ದಾರೆ.