ತುಂಬೆ: ರಕ್ಷಕ-ಶಿಕ್ಷಕ ಸಮಾವೇಶ, ಕ್ರೀಡಾಕೂಟ

Update: 2020-01-13 08:46 GMT

ಬಂಟ್ವಾಳ, ಜ. 13: ಪೋಷಕರು ತಮ್ಮ ಮಕ್ಕಳ ಕಲಿಕೆ-ನಡತೆಯನ್ನು ಸದಾ ಗಮನಿಸುತ್ತಿರಬೇಕು. ಇಲ್ಲವಾದರೆ ಅವರ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ನಿರ್ದೇಶಕ, ಉದ್ಯಮಿ ಜಗನ್ನಾಥ ಚೌಟ ಹೇಳಿದ್ದಾರೆ.  

ಅವರು ತುಂಬೆ ಕಾಲೇಜಿನ ಕ್ರೀಡಾಂಗಣದಲ್ಲಿ ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ರಕ್ಷಕ-ಶಿಕ್ಷಕ ಸಮಾವೇಶದಲ್ಲಿ ರಕ್ಷಕ-ಶಿಕ್ಷಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. 

ರಕ್ಷಕ-ಶಿಕ್ಷಕ ಸಭೆ ಅಥವಾ ಸಮಾವೇಶವೆಂದರೆ ಅದೊಂದು ವ್ಯವಸ್ಥೆ. ಮಕ್ಕಳು ಹುಟ್ಟಿ ಬೆಳೆಯುತ್ತಾ ಮನೆಯಲ್ಲಿ ಪೋಷಕರ ಜೊತೆಗೂಡಿ ಸಂಸ್ಕೃತಿಯನ್ನು ಕಲಿಯುತ್ತಾರೆ.  ಅದೇ ರೀರಿ ಸಮಾಜದಲ್ಲಿ ಇತರರ ಜೊತೆ ಸೇರಿ ಯಾವ ರೀತಿ ಬದುಕಬೇಕೆನ್ನುವ ಜೀವನ ಶಿಕ್ಷಣವನ್ನು ಶಾಲೆ-ಕಾಲೇಜಿನಲ್ಲಿ ಕಲಿಯುತ್ತಾರೆ ಎಂದು ಹೇಳಿದರು.  

ಡಾ. ಅಮೀರ್ ಅಹ್ಮದ್ ತುಂಬೆ ಮಾತನಾಡಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಸಂಘದ ಕ್ರೀಡಾಕೂಟ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತುಂಬೆ ಕಾಲೇಜಿನ ಪ್ರಾಂಶುಪಾಲ, ಕೆ.ಎನ್. ಗಂಗಾಧರ ಆಳ್ವ ಮಾತನಾಡಿ, ಶಿಕ್ಷಕ-ರಕ್ಷಕರು ಒಟ್ಟು ಸೇರಿ ಕಾರ್ಯಪ್ರೌವೃತ್ತರಾದಾಗ ಶಿಕ್ಷಣ ಸಂಸ್ಥೆ ಸಾಧನೆಯನ್ನು ಮಾಡುತ್ತದೆ ಎಂದರು. ಯಾಂತ್ರಿಕ ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಪೋಷಕರು ಮಾದರಿ ಆಗಬೇಕಾದ ಅನಿವಾರ್ಯತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಎಲ್‍ಡಿ ಬ್ಯಾಂಕ್ ನಿರ್ದೇಶಕ ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಉಪಾಧ್ಯಕ್ಷ ನಿಸಾರ್ ಅಹ್ಮದ್, ಎಫ್.ಎ. ಖಾದರ್, ಪುದು ಕೊಡ್ಮಾಣ್ ಗ್ರಾಮದ ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಎಚ್. ಕರೀಂ, ನಿವೃತ್ತ ಪ್ರಾಧ್ಯಾಪಕ ಫಲೂಲ್, ಪಿಟಿಎ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಸುವರ್ಣ, ಶ್ರೀ ದೇವದಾಸ್, ನಿಯಾಝ್ ಎಸ್. ಬಿ., ಕಾರ್ಯಕಾರಿ ಸಮಿತಿ ಸದಸ್ಯರಾದ ಸುಜಾತ, ಶಾಲಿನಿ, ಸುರೇಶ್ ನೆತ್ತರಕೆರೆ, ಮ್ಯಾಕ್ಷಿಮ್ ಕುವೆಲ್ಲೊ, ವಳವೂರು ಇಬ್ರಾಹಿಂ ಉಪಸ್ಥಿತರಿದ್ದರು.  

ತುಂಬೆ ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ತಂಡೆಲ್ ಸ್ವಾಗತಿಸಿದರು. ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ಬಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News