ಎನ್‌ಆರ್‌ಸಿ ಮೂಲಕ ಹಿಂದೂ ರಾಷ್ಟ್ರ ಮಾಡುತ್ತೇವೆ: ಭಟ್ಕಳದ ಮಸೀದಿಗಳಿಗೆ ಬಳ್ಳಾರಿ ಬಿಜೆಪಿ ಶಾಸಕರಿಂದ ಪತ್ರ ?

Update: 2020-01-14 18:21 GMT

ಭಟ್ಕಳ: ದೇಶದ ಬಿಜೆಪಿ ಶಾಸಕರಾದ ನಾವೆಲ್ಲರೂ ಸೇರಿ ಎನ್‌ಆರ್‌ಸಿ, ಸಿಎಎ ಮೂಲಕ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ. ಅಮಿತ್ ಶಾ ಸಂಸತ್ತಿನಲ್ಲಿ ಎನ್‌ಆರ್‌ಸಿ, ಸಿಎಎ, ರಾಮ ಮಂದಿರ್, ತ್ರಿವಳಿ ತಲಾಖ್ ಎಲ್ಲವನ್ನು ಮಂಡಿಸುವುದರ ಮೂಲಕ ನಮಗೆಲ್ಲ ಭಾರಿ ಖುಷಿ ತಂದುಕೊಟ್ಟಿದ್ದಾರೆ ಎಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಶಾಸಕ ಆನಂದ್ ಸಿಂಗ್ ಹಾಗೂ ಬಳ್ಳಾರಿಯ ಶಾಸಕ  ಬಿ.ಸೊಮಶೇಖರ್ ರೆಡ್ಡಿ ಎಂಬವವರ ಹೆಸರಿನಲ್ಲಿ ಭಟ್ಕಳದ ಫಾರೂಖಿ ಮಸೀದಿ, ಸಿದ್ದೀಕ್ ಮಸೀದ್ ಸೇರಿದಂತೆ 5-6 ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳ ವಿಳಾಸಕ್ಕೆ ಪತ್ರವೊಂದು ರವಾನೆಯಾಗಿದ್ದು ಈ ಕುರಿತಂತೆ ಭಟ್ಕಳದಲ್ಲಿ ಭಾರೀ ಆಕ್ರೋಶವುಂಟಾಗಿದೆ.

ಭಾರತದಲ್ಲಿ ನೀವು ಬದುಕಬೇಕಾದರೆ ಕೆಲವೊಂದು ಶರತ್ತುಗಳನ್ನು ಪಾಲಿಸಬೇಕಾಗಿದ್ದು, ಮೊದಲನೆ ಷರತ್ತು ನೀವು ಇಸ್ಲಾಮ್ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಬೇಕಾಗುತ್ತದೆ. ಎರಡನೆ ಷರತ್ತಿನಲ್ಲಿ ಮುಸ್ಲಿಮ್ ಮಹಿಳೆಯರು ಕೇವಲ ಹಿಂದೂ ಪುರಷರೊಂದಿಗೆ ವಿವಾಹವಾಗಬೇಕಾಗುತ್ತದೆ... ಹೀಗೆ ಸುಮಾರು 16 ಷರತ್ತುಗಳನ್ನು ವಿಧಿಸಲಾಗಿದೆ.

ಅಲ್ಲದೆ ದೇಶದ ಎಲ್ಲ ಮಸೀದಿಗಳನ್ನು ಒಡೆದು ಮಂದಿರಗಳನ್ನಾಗಿ ಪರಿವರ್ತಿಸಲಾಗುವುದು, ಎಲ್ಲ ಮುಸ್ಲಿಮರು ಕಲಿಮಾ ಪಠಿಸದೆ ಕೇವಲ ಹರೇ ರಾಂ, ಹರೇ ಕೃಷ್ಣ, ಓಂ ನಮಾಶಿವಾಯ ಎಂಬ ಮಂತ್ರಗಳನ್ನು ಉಚ್ಚರಿಸಬೇಕು, ಹೀಗೆ ಹಲವು ವಿಷಯಗಳನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದ್ದು ಮಸೀದಿ ಆಡಳಿತ ಹಾಗೂ ಇಲ್ಲಿನ ಮುಸ್ಲಿಮರು ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ಈ ಪತ್ರ ಬರೆದಿದ್ದಾರೆ ಎನ್ನಲಾಗಿರುವ ಬಳ್ಳಾರಿ ಜಿಲ್ಲೆಯ ಶಾಸಕರ ವಿರುದ್ಧ ಪೊಲೀಸ್ ದೂರನ್ನು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಪತ್ರದ ಲಿಪಿ ಕನ್ನಡದಲ್ಲಿದ್ದರು ಅದರ ಭಾಷೆ ಹಿಂದಿಯಾಗಿದ್ದು ಮೇಲ್ನೋಟಕ್ಕೆ ಇದೊಂದು ಕಿಡಿಗೇಡಿಗಳ ಕೃತ್ಯ ಎಂಬುದು ತಿಳಿದು ಬರುತ್ತದೆ. ಆದರೆ ಸಮಾಜದಲ್ಲಿ ಅದರಲ್ಲೂ ಮುಸ್ಲಿಮರಲ್ಲಿ ಅಶಾಂತಿ, ಗೊಂದಲ ಮೂಡಿಸಿ ಇಲ್ಲಿನ ವಾತಾವರಣ ಹಾಳು ಮಾಡುವ ಉದ್ದೇಶ ಇದಾಗಿದ್ದು ಇಂತಹ ಕಿಡಿಗೇಡಿಗಳನ್ನು ಕೂಡಲೆ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕಾಗಿದೆ ಎಂಬುದು ಮಸೀದಿ ಆಡಳಿತ ಮಂಡಳಿ ಹಾಗು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News