ಪುತ್ತೂರು : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

Update: 2020-01-14 18:25 GMT

ಪುತ್ತೂರು: ಅಸಂವಿಧಾನಿಕ ಕಾನೂನುಗಳನ್ನು ಒಪ್ಪಲು ಈ ದೇಶದ ಜಾತ್ಯಾತೀತರಿಗೆ ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಸರ್ವಾಧಿಕಾರದ ವಿರುದ್ಧ ವಿದ್ಯಾರ್ಥಿ ಕ್ರಾಂತಿ ಆರಂಭಗೊಂಡಿದೆ. ಸರ್ಕಾರದ ಸರ್ವಾಧಿಕಾರ ಕೊನೆಗೊಳ್ಳುವ ತನಕ ಹೋರಾಟ ಮುಂದುವರಿಯಲಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯ ಸವಾದ್ ಕಲ್ಲರ್ಪೆ ಎಚ್ಚರಿಸಿದರು.

ಅವರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‍ಐ) ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಎನ್‍ಆರ್‍ಸಿ, ಸಿಎಎ ಮತ್ತು ಎನ್‍ಪಿಆರ್ ಕಾಯ್ದೆಯನ್ನು ವಿರೋಧಿಸಿ ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿನ ಗಾಂಧಿ ಕಟ್ಟೆಯಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಝಾಕ್ ಮರ್ದಾಳ ಮಾತನಾಡಿ ದೇಶದಲ್ಲಿ ಹಿಂದೂ, ಮುಸ್ಲಿಂ ಕ್ರೈಸ್ತ ಸಮುದಾಯಗಳು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈ ಸೌಹಾರ್ದತೆಯನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಪ್ರಯತ್ನ ನಡೆಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದರು.

ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷ ರಿಯಾಝ್ ಅಂಕತಡ್ಕ ಮಾತನಾಡಿ ಇಂದಿನ ಕೇಂದ್ರ ಸರ್ಕಾರ ಬ್ರಿಟಿಷರ ವಿಭಜಕ ಸಿದ್ದಾಂತವನ್ನು ಪ್ರತಿಪಾದಿಸುತ್ತದೆ. ಇದನ್ನು ತಡೆಯಲು ವಿದ್ಯಾರ್ಥಿ ಸಮುದಾಯ ತಯಾರಾಗಿದೆ. ಬ್ರಿಟಿಷರನ್ನು ದೇಶದಿಮದ ಹೊರ ಹಾಕಲು ಸಾಧ್ಯವಾಗಿದ್ದರೆ ಇಂತಹ ಕರಾಳ ಕಾನೂನನ್ನು ನಿರ್ಮೂಲನೆ ಮಾಡಲೂ ನಮಗೆ ಸಾಧ್ಯವಿದೆ ಎಂದರು.

ಪ್ರತಿಭಟನೆಯಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಮನ್ಸೂರ್, ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ, ತಾಲೂಕು ಅಧ್ಯಕ್ಷ ಇಲ್ಯಾಸ್, ಕ್ಯಾಂಪಸ್ ಫ್ರಂಟ್ ಪುತ್ತುರು ಜಿಲ್ಲಾ ಸಮಿತಿ ಸದಸ್ಯರಾದ ಅಫ್ರಿದ್ ಕೂರ್ನಡ್ಕ, ಶಮ್ಮಾಸ್ ಬನ್ನೂರು, ಸಬೀರ್ ಕಲ್ಲರ್ಪೆ ಸೇರಿದಂತೆ ವಿದ್ಯಾರ್ಥಿಗಳ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News