ಬಂಟ್ವಾಳ : ಮನೆಗೆ ನುಗ್ಗಿ ನಗ-ನಗದು ಕಳವು

Update: 2020-01-15 17:25 GMT

ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು ನಗದು, ಚಿನ್ನಾಭರಣ ಸೇರಿ ಸುಮಾರು 4.65 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ ಘಟನೆ ಸಂಗಬೆಟ್ಟು ಗ್ರಾಮದ ಕೆರೆಬಳಿಯಲ್ಲಿ ಬುಧವಾರ ಬೆಳಕಿಗೆ ಬಂದಿದೆ.

ಸಂಗಬೆಟ್ಟು ಕೆರೆಬಳಿ ನಿವಾಸಿ ನಝೀರ್ ಅಹ್ಮದ್ ಎಂಬವರ ಮನೆಗೆ ಕಳ್ಳರು ನುಗ್ಗಿದ್ದು, ಕಪಾಟಿನಲ್ಲಿದ್ದ 12.50 ಪವನ್ ಚಿನ್ನ, 2 ಲಕ್ಷ ರೂ.ನಗದು ಹಾಗೂ 15 ಸಾವಿರ ರೂ. ಮೌಲ್ಯದ ವಾಚ್ ಸೇರಿದಂತೆ ಒಟ್ಟು 4.65 ಲಕ್ಷ ರೂ.ಗಳ ವಸ್ತುಗಳನ್ನು ಕಳವು ಮಾಡಿದ್ದಾರೆ. ನಝೀರ್ ಅವರು ಕಳಸದಲ್ಲಿ ಅಂಗಡಿ ಹೊಂದಿದ್ದು, ಅಲ್ಲಿನ ಜಾತ್ರೆಯ ಹಿನ್ನೆಲೆಯಲ್ಲಿ ಅವರ ಮನೆಯವರು ಜ. 14ರಂದು ಸಂಜೆ ಮನೆಗೆ ಬೀಗ ಹಾಕಿ ಜಾತ್ರೆಗೆ ತೆರಳಿದ್ದರು.

ಆದರೆ ಬುಧವಾರ ಬೆಳಗ್ಗೆ ಅವರ ತಮ್ಮ ಬಶೀರ್ ಕರೆ ಮಾಡಿ ಕಳವಿನ ವಿಚಾರ ತಿಳಿಸಿದ್ದು, ತಕ್ಷಣ ಹೊರಟು ಬಂದಿದ್ದಾರೆ. ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷ ಟಿ.ಡಿ.ನಾಗರಾಜ್, ಗ್ರಾಮಾಂತರ ಠಾಣಾ ಸಬ್‌ಇನ್ಸ್ಪೆಕ್ಟರ್ ಪ್ರಸನ್ನ ಎಂ.ಎಸ್, ಎಎಸ್‌ಐ ಕಲೈಮಾರ್, ಹೆಡ್‌ಕಾನ್ಸ್ಟೇಬಲ್ ಸುರೇಶ್, ಸಿಬಂದಿ ಆದರ್ಶ್, ನಾಗನಾಥ್ ಹಾಗೂ ಮನೋಜ್ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News