ಸಮ್ಮೇಳನದ ಆರಂಭ ವಿಳಂಬ: ನಾರಾಯಣ ಮೂರ್ತಿ ಅಸಮಾಧಾನ
Update: 2020-01-15 17:57 GMT
ಹೊಸದಿಲ್ಲಿ, ಜ.15: ಹೊಸದಿಲ್ಲಿಯ ಜವಾಹರಲಾಲ್ ಕ್ರೀಡಾಂಗಣದಲ್ಲಿ ಅಮೆಝಾನ್ ಸಂಸ್ಥೆ ಆಯೋಜಿಸಿದ್ದ ‘ಅಮೆಝಾನ್ ಸಮ್ಮೇಳನ’ ನಿಗದಿತ ಸಮಯಕ್ಕಿಂತ ಸುಮಾರು ಒಂದೂವರೆ ಗಂಟೆ ವಿಳಂಬವಾಗಿ ಆರಂಭವಾದ ಬಗ್ಗೆ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅಸಮಾಧಾನ ಸೂಚಿಸಿದ ಘಟನೆ ನಡೆದಿದೆ. ಕಾಲಹರಣ ಮಾಡಿ ನನಗೆ ಅಭ್ಯಾಸವಿಲ್ಲ. ಈಗಾಗಲೇ ಒಂದೂವರೆ ಗಂಟೆ ವಿಳಂಬವಾಗಿದೆ. ನನಗೆ 20 ನಿಮಿಷ ಮಾತನಾಡಲು ಸಮಯಾವಕಾಶ ನೀಡಿದ್ದಾರೆ. ಅದರಂತೆ 11:45 ಗಂಟೆಗೆ ನನ್ನ ಭಾಷಣ ಮುಗಿಯಬೇಕಿತ್ತು. ಆದರೆ ಭಾಷಣ ಆರಂಭಿಸುವಾಗಲೇ ಗಂಟೆ 11:53 ಆಗಿರುವುದರಿಂದ 5 ನಿಮಿಷ ಮಾತ್ರ ಮಾತನಾಡುತ್ತೇನೆ ಎಂದು 5 ನಿಮಿಷಕ್ಕೆ ಭಾಷಣ ಮುಗಿಸಿದರು. ಭಾಷಣ ಮುಗಿಸಿದ ನಾರಾಯಣ ಮೂರ್ತಿ ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆಯೇ ಅವರನ್ನು ವಾಪಾಸು ಕರೆದ ಅಮೆಝಾನ್ನ ಸ್ಥಾಪಕ ಜೆಫ್ ಬೆರೆಸ್, ಮೂರ್ತಿಗೆ ಸ್ಮರಣಿಕೆ ನೀಡಿ ಗೌರವಿಸಿದರು.