ದಾಖಲೆ ಪತ್ರಗಳನ್ನು ನೀಡದೆ ಅಸಹಕಾರ ಚಳವಳಿ: ಭವ್ಯಾ ನರಸಿಂಹಮೂರ್ತಿ

Update: 2020-01-17 15:16 GMT

ಮಂಗಳೂರು, ಜ.17: ಬ್ರಿಟಿಷರು ದೇಶ ಬಿಟ್ಟು ತೊಲಗಲು ಗಾಂಧೀಜಿ ಯಾವ ರೀತಿ ಅಸಹಕಾರ ಚಳವಳಿ ಕೈಗೊಂಡಿದ್ದರೋ ಅದೇ ರೀತಿ ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಎನ್‌ಆರ್‌ಸಿ - ಸಿಎಎ-ಎನ್‌ಪಿಆರ್‌ಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಪತ್ರಗಳನ್ನು ನೀಡದೆ ಅಸಹಕಾರ ಚಳವಳಿ ಮಾಡಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಭವ್ಯಾ ನರಸಿಂಹಮೂರ್ತಿ ಕರೆ ನೀಡಿದರು.

ಬಜ್ಪೆಯ ‘ಸಂವಿಧಾನ ಸಂರಕ್ಷಣಾ ವೇದಿಕೆ’ಯ ವತಿಯಿಂದ ಬಜ್ಪೆ ಪರಿಸರದ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಮರ್‌ಹೂಂ ಅಬ್ದುಲ್ ಜಲೀಲ್ ಹಾಗೂ ನೌಶೀನ್ ಕುದ್ರೋಳಿ ವೇದಿಕೆಯಲ್ಲಿ ಶುಕ್ರವಾರ ನಡೆದ ನಾಗರಿಕ ಹಕ್ಕು ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೋಡಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ಇರಬೇಕು. ಆದರೆ ಈ ಜೋಡಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ನೋಟ್ ಬ್ಯಾನ್, ಜಿಎಸ್‌ಟಿ ಇತ್ಯಾದಿ ಜಾರಿಗೊಳಿಸಿದಾಗ ಜನರು ಮೌನವಾಗಿದ್ದನ್ನೇ ಜನತೆಯ ದೌರ್ಬಲ್ಯ ಎಂದು ಭಾವಿಸಿದ ಈ ಜೋಡಿ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಜಾರಿಗೊಳಿಸಲು ಮುಂದಾಗಿದೆ. ಆದರೆ ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗುತ್ತಿರುವುದನ್ನು ಕಂಡು ಈ ಜೋಡಿ ಇದೀಗ ಭಯಗೊಂಡಿದೆ. ಅದಾಗ್ಯೂ ಮಾಹಿತಿ ಕೊಡದಿದ್ದರೆ ದಂಡ ಹಾಕುವುದಾಗಿ ಬೆದರಿಸುತ್ತಿವೆ. ಈ ಕರಾಳ ಕಾಯ್ದೆಯನ್ನು ಹಿಂಪಡೆಯುವವರೆಗೆ ಹೋರಾಟ ನಿಲ್ಲಿಸಬಾರದು. ಅಸಹಕಾರ ಚಳವಳಿಯ ಮೂಲಕ ಈ ಜೋಡಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಭವ್ಯಾ ನರಸಿಂಹ ಮೂರ್ತಿ ಹೇಳಿದರು.

ತನ್ನ ಆಡಳಿತವನ್ನು, ರೂಪಿಸಿದ ಕಾಯ್ದೆಯನ್ನು ಪ್ರಶ್ನಿಸಬಾರದು ಎಂದು ಮೋದಿ-ಶಾ ಜೋಡಿ ನಿರ್ಧರಿಸಿದಂತಿದೆ. ಆದರೆ ದೇಶದ ಪ್ರಜ್ಞಾವಂತ ಯುವ ಜನತೆ ಅದರಲ್ಲೂ ವಿದ್ಯಾರ್ಥಿ ಯುವ ಸಮೂಹ ಎಚ್ಚೆತ್ತುಕೊಂಡಿದೆ. ಇದರಿಂದ ಕಂಗಾಲಾದ ಈ ಜೋಡಿಯು ಜೆಎನ್‌ಯು ಕ್ಯಾಂಪಸ್‌ನೊಳಗೆ ನುಗ್ಗಿ ದಾಂಧಲೆ ನಡೆಸುತ್ತಿದೆ ಎಂದ ಭವ್ಯಾ ನರಸಿಂಹ ಮೂರ್ತಿ, ಕೇಂದ್ರ ಸಂಪುಟದಲ್ಲಿ ಮೌಢ್ಯದಲ್ಲಿ ನಂಬಿಕೆಯುಳ್ಳವರು ತುಂಬಿದ್ದಾರೆ. ಇವರಿಂದ ಮಾಜಿ ರಾಷ್ಟ್ರಪತಿ ಅಬುಲ್ ಕಲಾಂ ಆಝಾದ್ ಕಂಡ ‘2020ಯ ಭಾರತ’ದ ಕನಸು ನನಸು ಆಗದು. ಡಿಜಿಟಲ್ ಭಾರತಕ್ಕೆ ಒತ್ತು ಕೊಡುವೆವು ಎಂದ ಕೇಂದ್ರ ಸರಕಾರವೇ ಜಮ್ಮುವಿನಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಿ 9 ಸಾವಿರ ಕೋ.ರೂ. ನಷ್ಟಕ್ಕೆ ಕಾರಣವಾಗಿದೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ದ್ವೇಷದ ರಾಜಕೀಯ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಯುವ ಸಮೂಹ ಪಣತೊಡಬೇಕು ಎಂದರು.

ನಾವು ಟಿಪ್ಪು ವಂಶಸ್ಥರು: ಜ್ಞಾನಪ್ರಕಾಶ ಸ್ವಾಮೀಜಿ

ನಾವು ಸ್ವಾತಂತ್ರ ಸೇನಾನಿ ಟಿಪ್ಪು ಸುಲ್ತಾನ್‌ರ ವಂಶಸ್ಥರೇ ವಿನಃ ಬ್ರಿಟಿಷರ ಬೂಟುಗಾಲು ನೆಕ್ಕಿದವರ ವಂಶಸ್ಥರಲ್ಲ. ಟಿಪ್ಪು ಸುಲ್ತಾನ್ ಈ ದೇಶದ ಸ್ವಾಭಿಮಾನದ ಸಂಕೇತವಾಗಿದ್ದಾರೆ. ಆದರೆ ಸುಳ್ಳುಗಳನ್ನೇ ಬಿತ್ತುವ ಮತ್ತು ಬೆಳೆಯುವ ಮೋದಿ-ಶಾ ಜೋಡಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ. ಅದಕ್ಕಾಗಿ ಜನರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.

ಎನ್‌ಆರ್‌ಸಿನ ಬೇರು ಹಿಂದುತ್ವದಲ್ಲಿ, ಹಿಂದುತ್ವದ ಬೇರು ಮನುವಾದದಲ್ಲಿ, ಮನುವಾದದ ಬೇರು ವರ್ಣಾಶ್ರಮದಲ್ಲಿ, ವರ್ಣಾಶ್ರಮದ ಬೇರು ನಾಗ್ಪುರದಲ್ಲಿ, ನಾಗ್ಪುರದ ಬೇರು ಬಿಜೆಪಿಯಲ್ಲಿ, ಬಿಜೆಪಿಯ ಬೇರು ಇವಿಎಂನಲ್ಲಿದೆ. ಈ ಇವಿಎಂ ನಿಂದಾಗಿಯೇ ಗೆದ್ದ ‘ಮೋ-ಶಾ’ ಜೋಡಿಯು ಸಂವಿಧಾನದ ಪುಟಗಳನ್ನು ತಿಗಣೆಗಳಂತೆ ತಿನ್ನುತ್ತಿವೆ. ದೇಶ ಕಟ್ಟುವ ಬದಲು ದೇಶವನ್ನು ವಿಭಜಿಸುವ ಈ ಜೋಡಿಯು ನಿಜವಾದ ದೇಶದ್ರೋಹಿಗಳಾಗಿವೆ. ಪಾರ್ಲಿಮೆಂಟ್, ಸುಪ್ರೀಂ ಕೋರ್ಟ್ ‘ಸುಪ್ರೀಂ’ ಎಂದು ಈ ಜೋಡಿ ಭಾವಿಸಿದೆ. ಆದರೆ ಪ್ರಜಾಪ್ರಭುತ್ವದ ಬೇರುಗಳಾದ ಜನರೇ ನಿಜವಾದ ಸುಪ್ರೀಂ ಎಂಬುದನ್ನು ಈ ಜೋಡಿ ಮೊದಲು ತಿಳಿದುಕೊಳ್ಳಲಿ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಕುಟುಕಿದರು.

ಮೋದಿ ಮೊದಲು ಪೌರತ್ವ ರುಜುವಾತುಪಡಿಸಲಿ: ಭಾಸ್ಕರ ಪ್ರಸಾದ್ 

ಇರ್ತಲೆ ಹಾವಿನಂತೆ ದಿನಕ್ಕೊಂದು ಸುಳ್ಳು ಹೇಳುವ ಪ್ರಧಾನಿ ಮೋದಿ ಈ ನೆಲದ ಮಣ್ಣಿನ ಮಕ್ಕಳು, ಮೂಲ ನಿವಾಸಿಗಳಿಂದ ಪೌರತ್ವದ ರುಜುವಾತು ಕೇಳುತ್ತಿದ್ದಾರೆ. ಆದರೆ ನಾಗ್ಪುರದ ತಾಳಕ್ಕೆ ಕುಣಿಯುವ ಮೋದಿ ಮೊದಲು ತನ್ನ ಪೌರತ್ವ ರುಜುವಾತುಪಡಿಸಲಿ. ಆ ಮೇಲೆ ದೇಶಭಾಂದವರ ಪೌರತ್ವದ ದಾಖಲೆಗಳನ್ನು ಕೇಳಲಿ ಎಂದು ಸಾಮಾಜಿಕ ಹೋರಾಟಗಾರ ಭಾಸ್ಕರ ಪ್ರಸಾದ್ ಹೇಳಿದರು.

ಕೇಂದ್ರ ಸರಕಾರದ ಕರಾಳ ಕಾನೂನು ಜಾರಿಯಾದರೆ ಅದರಿಂದ ಕೇವಲ ಮುಸ್ಲಿಮರಿಗೆ ಮಾತ್ರ ಧಕ್ಕೆಯಲ್ಲ, ಸುಮಾರು 15 ಕೋಟಿಯಷ್ಟು ಅಲೆಮಾರಿಗಳು, 8.5 ಕೋಟಿಯಷ್ಟು ಆದಿವಾಸಿಗಳು, 3 ಕೋಟಿಯಷ್ಟು ಭೂರಹಿತರು ಪೌರತ್ವ ಕಳಕೊಳ್ಳುವ ಭೀತಿ ಇದೆ. ಹಾಗಾಗಿ ಇಂತಹ ಪ್ರತಿಭಟನಾ ಸಮಾವೇಶಗಳು ಮುಸ್ಲಿಮರಿಗೆ ಸೀಮಿತವಾಗದೆ ಎಲ್ಲರನ್ನು ಒಳಗೊಂಡಿರಬೇಕು. ನಾಡಿನ ದಲಿತರು, ಮುಸ್ಲಿಮರು ಒಂದಾದರೆ ಶೇ.3ರಷ್ಟಿರುವ ಬ್ರಾಹ್ಮಣ್ಯಶಾಹಿಯ ವಿರುದ್ಧ ಮೇಲುಗೈ ಸಾಧಿಸಲಿದ್ದಾರೆ ಎಂದು ಭಾಸ್ಕರ ಪ್ರಸಾದ್ ನುಡಿದರು.

ನಮ್ಮ ಒಗ್ಗಟ್ಟು ಮುರಿಯಲು ಸಾಧ್ಯವಿಲ್ಲ: ವಿಲಿಯಂ ಮಾರ್ಟಿನ್ 

ಮಂಗಳೂರಿನಲ್ಲಿ ಇಬ್ಬರು ಅಮಾಯಕ ಯುವಕರನ್ನು ಕೊಂದು ಹಾಕುವ ಮೂಲಕ ಎನ್‌ಆರ್‌ಸಿ ವಿರುದ್ಧ ಹೋರಾಡುವವರನ್ನು ಸದೆಬಡಿಯಬಹುದು ಎಂದು ಆಡಳಿತ ವರ್ಗ ಭಾವಿಸಿದ್ದರೆ ಅದು ತಪ್ಪು. ಹೋರಾಟಕ್ಕೆ ಹೇಗೆ ಧುಮುಕಬಹುದು ಎಂಬುದಕ್ಕೆ ಅಡ್ಯಾರ್ ಕಣ್ಣೂರಿನಲ್ಲಿ ಮೊನ್ನೆ ನಡೆದ ಸಮಾವೇಶವೇ ಸಾಕ್ಷಿಯಾಗಿದೆ. ದೇಶದ ಸಂವಿಧಾನ ಗಟ್ಟಿಯಿದೆ. ಅದರಡಿಯಲ್ಲೇ ನಾವು ಒಗ್ಗೂಡುವೆವು. ಹಾಗಾಗಿ ನಮ್ಮ ಒಗ್ಗಟ್ಟನ್ನು ಮುರಿಯಲು ಯಾರಿಗೂ ಸಾಧ್ಯವಿಲ್ಲ ಎಂದು ಸಮಾವೇಶ ಉದ್ಘಾಟಿಸಿದ ಫಾ. ವಿಲಿಯಂ ಮಾರ್ಟಿಸ್ ನುಡಿದರು.

ದೇಶದ ಭವ್ಯ ಸ್ಮಾರಕಗಳೇ ನಮ್ಮ ದಾಖಲೆಗಳು: ಮೌಲಾನಾ ಮುಅಝ್ಝವ್

ಭಾರತದ ಮುಸ್ಲಿಮರನ್ನು ಆಳುವ ವರ್ಗವು ಕಳೆದ ಐದಾರು ವರ್ಷದಲ್ಲಿ ಸತತವಾಗಿ ಹಿಂಸಿಸುತ್ತಿವೆ. ದೌರ್ಜನ್ಯ ಎಸಗುತ್ತಿವೆ. ಮುಸ್ಲಿಮರ ತಾಳ್ಮೆಯನ್ನು ಪರೀಕ್ಷಿಸುವ ಮುನ್ನ ಮುಸ್ಲಿಮರು ಈ ದೇಶಕ್ಕೆ ನೀಡಿದ ಕೊಡುಗೆಯ ಬಗ್ಗೆಯೂ ಒಮ್ಮೆ ಅವಲೋಕಿಸಿ. ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟ ಟಿಪ್ಪು ಸುಲ್ತಾನ್‌ರ ವಂಶಜರು ನಾವು. ಭಾರತದ ಮುಸ್ಲಿಮರ ಅಸ್ತಿತ್ವದ ಬಗ್ಗೆ ಬಾಬರಿ ಮಸ್ಜಿದ್‌ಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ನೀಡಿದ ದಾಖಲೆಪತ್ರಗಳೇ ಸಾಕು. ಇಲ್ಲಿನ ಅನೇಕ ಭವ್ಯ ಸ್ಮಾರಕಗಳು ಕೂಡ ನಮ್ಮ ಅಸ್ತಿತ್ವದ ದಾಖಲೆಗಳಾಗಿವೆ ಎಂದು ಕುಂದಾಪುರ ಮಸೀದಿಯ ಇಮಾಮ್ ಮೌಲಾನಾ ಮುಅಝ್ಝಮ್ ಹೇಳಿದರು.

ಸಿಸಿಟಿವಿ ಫೂಟೇಜ್ ಬಿಡುಗಡೆಗೊಳಿಸಿ: ಸುಧೀರ್ ಕುಮಾರ್ ಮುರೋಳಿ

ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಅವರಿಗೆ ಯೋಗ್ಯತೆ ಇದ್ದರೆ, ತಾಕತ್ತು ಇದ್ದರೆ, ಸರಕಾರಿ ಸಮವಸ್ತ್ರಕ್ಕೆ ಗೌರವ ಕೊಡುವುದಾದರೆ ಮೊದಲು ಬಂದರ್ ಠಾಣೆಯ ಸಿಸಿಟಿವಿಯ ಫೂಟೇಜ್ ಬಿಡುಗಡೆಗೊಳಿಸಲಿ. ಅಲ್ಲದೆ ಕೋವಿಯ ಅಂಗಡಿಗೆ ನುಗ್ಗಿದ ದೃಶ್ಯಾವಳಿಯನ್ನು ನೀಡಿದರೆ ನಾನು ಈವತ್ತಿನಿಂದಲೇ ಸಾರ್ವಜನಿಕ ಸಮಾರಂಭಗಳಲ್ಲಿ ಮಾತನಾಡುವುದನ್ನು ನಿಲ್ಲಿಸುವೆ ಎಂದು ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿ ಈ ಸಂದರ್ಭ ಸವಾಲು ಹಾಕಿದರು.

ಬಜ್ಪೆಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಜಾವಳೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವಿ. ಮುಹಮ್ಮದ್ ಸ್ವಾಗತಿಸಿ ದರು. ಅಲ್‌ಹಿಕ್ಮಾ ವಿದ್ಯಾಸಂಸ್ಥೆಯ ಅಧ್ಯಕ್ಷ ಶರೀಫ್ ರಯ್ಯೆನ ಸ್ವತಃ ರಚಿಸಿದ ಧ್ಯೇಯಗೀತೆಯನ್ನು ಹಾಡಿದರು. ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News