ಅಪಘಾತ ಪ್ರಕರಣ: ಆರೋಪಿ ಲಾರಿ ಚಾಲಕನಿಗೆ ಜೈಲುಶಿಕ್ಷೆ
ಉಡುಪಿ, ಜ.17: ಆರು ವರ್ಷಗಳ ಹಿಂದೆ ಸಂಭವಿಸಿದ ಅಪಘಾತ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿ ಜ.8ರಂದು ಆದೇಶ ನೀಡಿದೆ.
ಲಾರಿ ಚಾಲಕ, ತಮಿಳುನಾಡು ಕೊಯಮುತ್ತೂರಿನ ಸುರೇಶ್ ಎಂಬಾತ ಶಿಕ್ಷೆಗೆ ಗುರಿಯಾದ ಆರೋಪಿ. 2014ರ ಜ.3ರಂದು ಅಂಬಲಪಾಡಿ ಜಂಕ್ಷನ್ ಕಡೆಯಿಂದ ಕಿನ್ನಿಮೂಲ್ಕಿ ಕಡೆಗೆ ಬರುತ್ತಿದ್ದ ಲಾರಿಯು ಬೇರೆ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಬೈಕಿಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಬೈಕ್ ಹಿಂಬದಿ ಸವಾರ ಸದಾಶಿವ ಪೂಜಾರಿ ಸ್ಥಳದಲ್ಲೇ ಮೃತಪಟ್ಟು, ಕೆಮ್ತೂರಿನ ದಿನೇಶ ಪೂಜಾರಿ ಎಂಬವರು ಗಾಯಗೊಂಡಿದ್ದರು.
ಈ ಬಗ್ಗೆ ಉಡುಪಿ ನಗರ ಠಾಣೆಯ ಆಗಿನ ವೃತ್ತ ನಿರೀಕ್ಷಕ ಮಾರುತಿ ಜಿ. ನಾಯ್ಕ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಉಡುಪಿ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಧೀಶ ಮಂಜುನಾಥ್ ಎಂ.ಎಸ್., ಪ್ರಕರಣದ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ 1 ವರ್ಷ 5 ತಿಂಗಳು ಶಿಕ್ಷೆ ಮತ್ತು ಒಟ್ಟು 3,000 ರೂ.ಗಳ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಕಾನೂನು ಅಧಿಕಾರಿ(ಕಿರಿಯ) ಮುಮ್ತಾಝ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.