ಮದುವೆಯಾಗುವಂತೆ ಯುವತಿಗೆ ಹಲ್ಲೆ: ಆರೋಪಿಗೆ ಶಿಕ್ಷೆ

Update: 2020-01-17 16:14 GMT

ಉಡುಪಿ, ಜ.17: ಮದುವೆಯಾಗುವಂತೆ ಒತ್ತಾಯಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ಜ.7ರಂದು ಆದೇಶ ನೀಡಿದೆ.

ಚಿಟ್ಪಾಡಿಯ ಅನಂತ ಕೃಷ್ಣ ಪ್ರಭು ಶಿಕ್ಷೆಗೆ ಗುರಿಯಾದ ಆರೋಪಿ. 2017ರ ಜ.30ರಂದು ಇವರು ಉಡುಪಿಯ ಮಿಷನ್ ಆಸ್ಪತ್ರೆ ರಸ್ತೆಯ  ರೆಸಿಡೆನ್ಸಿಯಲ್ಲಿರುವ ಮಹಿಳೆಯ ಮನೆಗೆ ಅಕ್ರಮ ಪ್ರವೇಶ ಮಾಡಿ ಮದುವೆಯಾಗುವಂತೆ ಬರೆದು ಕೊಡಲು ಒತ್ತಾಯಿಸಿದ್ದು, ಆಕೆ ನಿರಾಕರಿಸಿದ್ದಕ್ಕೆ ಆಕೆಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದನು ಎಂದು ದೂರಲಾಗಿದೆ.

ಈ ಬಗ್ಗೆ ಉಡುಪಿ ಮಹಿಳಾ ಠಾಣೆಯ ಆಗಿನ ಪೊಲೀಸ್ ಉಪನಿರೀಕ್ಷಕಿ ಕಲ್ಪನಾ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಎಂ.ಎಸ್., ಆರೋಪಿ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ ಶಿಕ್ಷೆ ವಿಧಿಸಿದರು.

ಆದರೆ ಆರೋಪಿಯ ಪ್ರಾರ್ಥನೆಯಂತೆ ಅಪರಾಧ ಪರಿವೀಕ್ಷಣಾ ಕಾಯ್ದೆ ಕಲಂ 3ರಡಿ ಒಂದು ವರ್ಷಗಳ ಕಾಲ ಅಪರಾಧ ಪರಿವೀಕ್ಷಣೆಯಲ್ಲಿಟ್ಟು ನ್ಯಾಯಾಧೀಶರು ಆದೇಶ ನೀಡಿದರು. ಸರಕಾರದ ಪರವಾಗಿ ಹಿಂದಿನ ಪ್ರಭಾರ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಪ್ರಕರಣ ನಡೆಸಿದ್ದು, ಕಾನೂನು ಅಧಿಕಾರಿ(ಕಿರಿಯ) ಮಮ್ತಾಝ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News