ನರಿಕೊಂಬು: ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ ಉದ್ಘಾಟನೆ

Update: 2020-01-19 17:24 GMT

ಬಂಟ್ವಾಳ, ಜ. 19: ಸಾಮರಸ್ಯದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದರ ಜೊತೆಗೆ ನಮ್ಮ ದೈಹಿಕ ಆರೋಗ್ಯವನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು  ಮಾಜಿ ಸಚಿವ ಬಿ.ರಮನಾಥ ರೈ ಹೇಳಿದ್ದಾರೆ.

ಯುವಕಾಂಗ್ರೆಸ್ ಮತ್ತು ವಲಯ ಕಾಂಗ್ರೆಸ್ ಸಮಿತಿ ನರಿಕೊಂಬು ಶಂಭೂರು ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಹಾಗೂ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ನರಿಕೊಂಬುವಿ ನಲ್ಲಿ ನಡೆದ ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ  ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಕ್ರೀಡಾಪಟುಗಳ ಅನುಕೂಲದ  ಉದ್ದೇಶದಿಂದ ತಾಲೂಕು ಮಟ್ಟದ ಕ್ರೀಡಾಂಗಣವನ್ನು ನಿರ್ಮಿಸಲು ರಮನಾಥ ರೈಯವರು ಶ್ರಮಿಸಿದ್ದು, ಅನುದಾನವನ್ನು ಒದಗಿಸಿದ್ದಾರೆ. ಆದರೆ ಆ ಬಳಿಕ ಅಧಿಕಾರಕ್ಕೆ ಬಂದಿರುವ ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ಹೆಚ್ಚಿನ ಪ್ರಗತಿ ನಡೆದಿಲ್ಲ ಎಂದು ತಿಳಿಸಿದರು.

ಉದ್ಯಮಿ ಗೋಪಾಲಕೃಷ್ಣ ಆಚಾರ್ಯ, ಸ್ಥಳದಾನಿ ನಾರಾಯಣ ಸಪಲ್ಯ, ಕಬಡ್ಡಿ ಸಂಘಟಕ ಪ್ರಶಾಂತ್ ಕಾರಂತ್ ಅವರನ್ನು ಸನ್ಮಾನಿಸಲಾಯಿತು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಂಗಳೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಶ್ವಾಸ್ ದಾಸ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಅಧ್ಯಕ್ಷ  ಪದ್ಮನಾಭ ರೈ, ಉಪಾಧ್ಯಕ್ಷ  ಚಂದ್ರಶೇಖರ್ ಪೂಜಾರಿ ಕೊರ್ಯ, ತಾಪಂ ಸದಸ್ಯ ಗಾಯತ್ರಿ ರವೀಂದ್ರ ಸಪಲ್ಯ, ಇಂಟಕ್ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಉಮೇಶ್ ಬೋಳಂತೂರು,   ಪಿ.ಎಸ್. ಅಬ್ದುಲ್ ಹಮೀದ್, ಮಾಧವ ಕರ್ಬೆಟ್ಟು, ರವೀಂದ್ರ ಸಪಲ್ಯ, ಆನಂದ ಸಾಲ್ಯಾನ್, ದಿನೇಶ್ ಭಾಗಿರಥ ಕೋಡಿ, ರಂಜನ್ ಶೆಟ್ಟಿ, ಯುವಕಾಂಗ್ರೆಸ್ ನರಿಕೊಂಬು ವಲಯ ಅಧ್ಯಕ್ಷ ಪ್ರಸಾದ್ ಗಾಣಿಗ, ವಿಶ್ವನಾಥ ಪೂಜಾರಿ ಉಮೇಶ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು. ಉಮೇಶ್ ಬೋಳಂತೂರು ಪ್ರಸ್ತಾವಿಸಿದರು. ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News