ಕಾರುಗಳ ನಡುವೆ ಢಿಕ್ಕಿ: ನಾಲ್ವರಿಗೆ ಗಾಯ
Update: 2020-01-19 17:27 GMT
ವಿಟ್ಲ, ಜ. 19: ಕಾರುಗಳ ನಡುವೆ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಮಂಜೇಶ್ವರ ಹೆದ್ದಾರಿಯ ಬೈರಿಕಟ್ಟೆ ಅಶ್ವಥ ನಾರಾಯಣ ಭಜನಾ ಮಂದಿರ ಸಮೀಪ ರವಿವಾರ ನಡೆದಿದೆ.
ಆಲ್ಟೋ ಕಾರಿನಲ್ಲಿದ್ದ ಕಮಲಾ, ಮಲ್ಲಿಕಾ, ಝೈಲೋ ಕಾರಿನಲ್ಲಿದ್ದ ಇಸ್ಮಾಯಿಲ್ ಶಾಫಿ, ಐಸಮ್ಮ ಎಂಬವರಿಗೆ ಗಾಯಗಳಾಗಿದ್ದು, ಇವರನ್ನು ಪುತ್ತೂರು ಹಾಗೂ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ಯಾನ ಕಡೆಯಿಂದ ಬೈರಿಕಟ್ಟೆ ಮೂಲಕ ಅಳಿಕೆ ಕಡೆಗೆ ಹೋಗುತ್ತಿದ್ದ ಝೈಲೋ ಕಾರು ನಿಯಂತ್ರಣ ತಪ್ಪಿ ಅಲ್ಟೋ ಕಾರಿಗೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಢಿಕ್ಕಿ ರಭಸಕ್ಕೆ ಕಾರುಗಳು ಜಖಂಗೊಂಡಿದೆ.
ಅಲ್ಟೋ ಕಾರನಲ್ಲಿ ನಾಲ್ಕು ಮಂದಿ ಇದ್ದು, ಸಂಬಂಧಿಕರ ಮನೆಗೆ ಬಂದು ಹಿಂದಿರುಗುತ್ತಿದ್ದರೆನ್ನಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.