ದ.ಕ. ಜಿ.ಪಂ. ಕೆಡಿಪಿ ಸಭೆ : ಶಾಸಕ ಉಮಾನಾಥ್ ಕೋಟ್ಯಾನ್‌ರಿಂದ ಸಭಾತ್ಯಾಗ

Update: 2020-01-20 13:54 GMT

ಮಂಗಳೂರು, ಜ.20: ದ.ಕ. ಜಿಲ್ಲಾ ಪಂಚಾಯತ್‌ನ ತ್ರೈಮಾಸಿಕ ಕೆಡಿಪಿ ಸಭೆಯಿಂದ ಶಾಸಕ ಉಮಾನಾಥ ಕೋಟ್ಯಾನ್ ಸಾತ್ಯಾಗ ಮಾಡಿದ ಪ್ರಸಂಗ ನಡೆದಿದೆ.

ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆ ಯಲ್ಲಿ ಇಂದು ಕೆಪಿಡಿ ಸಭೆಯನ್ನು ನಿಗದಿಪಡಿಸಲಾಗಿತ್ತು.

ಸಭೆ ಸುಮಾರು ಒಂದು ಗಂಟೆ ತಡವಾಗಿ ಆರಂಭಗೊಂಡಿತು. ಸಭೆಯ ಆರಂಭದಲ್ಲೇ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ಅಧಿಕಾರಿಯೊಬ್ಬರು ತನ್ನ ಜತೆ ಉಡಾಫೆಯಿಂದ ವರ್ತಿಸಿರುವುದು ನೋವಾಗಿರುವುದಾಗಿ ಹೇಳಿದರು. ಆ ಅಧಿಕಾರಿಗೆ ನೋಟಿಸ್ ನೀಡಿ, ವಿವರಣೆ ಪಡೆಯಲು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿ, ಸಭೆ ಮುಂದುವರಿಸಿದರು.

ಆದರೆ ಇದರಿಂದ ತೃಪ್ತರಾಗದ ಶಾಸಕ ಕೋಟ್ಯಾನ್,‘‘ನ್ಯಾಯ ಸಿಗದೆ, ನಾನು ಸಭೆಯಲ್ಲಿ ಕುಳಿತುಕೊಳ್ಳುವುದಕ್ಕೆ ಅರ್ಥವಿಲ್ಲ’’ ಎಂದು ಹೇಳುತ್ತಾ ಸಭೆಯಿಂದ ಹೊರ ನಡೆದರು. ಶಾಸಕರು ತೆರಳಿದ ಬಳಿಕ, ಅವರಿಗೆ ಅವಮಾನ ಮಾಡಿದ್ದರು ಎನ್ನಲಾದ ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಅವರಲ್ಲಿ ವಿವರಣೆ ಕೇಳಲಾಯಿತು. ಕಾಮಗಾರಿಯೊಂದಕ್ಕೆ ಸಂಬಂಧಿಸಿದಂತೆ, ಅವರೇ ಸಾಕಷ್ಟು ಮಾತನಾಡಿದ್ದರು. ನನಗೆ ಮಾತನಾಡಲು ಅವಕಾಶ ಕೊಟ್ಟಿರಲಿಲ್ಲ ಎಂದು ಹೇಳಿದರು.

ಈ ಮಧ್ಯೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಶಾಸಕರೊಬ್ಬರನ್ನು ಅಧಿಕಾರಿ ಅವಮಾನ ಮಾಡಿರುವುದು ಖಂಡನೀಯ. ಈ ಬಗ್ಗೆ ಸೂಕ್ತ ತನಿಖೆ, ಶಿಸ್ತು ಕ್ರಮ ಆಗಬೇಕು. ಇಲ್ಲದಿದ್ದರೆ ನಾಳೆ ಇತರ ಶಾಸಕರ ಜತೆಯೂ ಪುನರಾವರ್ತನೆ ಆಗಬಹುದು ಎಂದರು. ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡುವಂತೆ ಸರಕಾರಕ್ಕೆ ಪತ್ರ ಬರೆಯಲು ಸಚಿವರು ಸೂಚನೆ ನೀಡಿದರು.

ಕೆಡಿಪಿ ಸಭೆಯನ್ನೂ ಕಾಡಿದ ಪಂಪ್‌ವೆಲ್ ಮೇಲ್ಸೇತುವೆ !

ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬದ ಕುರಿತಂತೆ ಇಂದು ನಡೆದ ಕೆಡಿಪಿ ಸಭೆಯಲ್ಲೂ ಚರ್ಚೆ ನಡೆಯಿತು.
2018ರ ಸೆ.28ರ ಕೆಡಿಪಿ ಸಭೆಯಲ್ಲಿ ಚರ್ಚೆಗೆ ಬಂದಿದ್ದ ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿಷಯ ಇಂದು ಮತ್ತೆ ಪ್ರಸ್ತಾಪಿಸಲ್ಪಟ್ಟಿತು. 10 ವರ್ಷವಾದರೂ ಕಾಮಗಾರಿ ಏಕೆ ಮುಗಿಸಲಾಗುತ್ತಿಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಏಕೆ ಉತ್ತರಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಪ್ರಶ್ನಿಸಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕೆಲಸ ಆರಂಭಗೊಂಡು 10 ವರ್ಷ ಎಂದು ತಪ್ಪು ಮಾಹಿತಿ ನೀಡಬೇಡಿ. 2016ರಲ್ಲಿ ಕಳಶ ತೆರವು ಮಾಡಿರುವುದು ಎಂದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು.

2012ರಲ್ಲಿ ನೀವು ಶಾಸಕರಾಗುವ ಮೊದಲೇ ಕಾಮಗಾರಿ ಆರಂಭಗೊಂಡಿದೆ. ಕಳಶ ಮತ್ತೆ ತೆಗೆದಿರಬಹುದು ಎಂದು ಐವನ್ ಡಿಸೋಜಾ ಪ್ರತಿಕ್ರಿಯಿಸಿದರು. ಈ ಸಂದರ್ಭ ಶಾಸಕರಾದ ರಾಜೇಶ್ ನಾಯ್ಕ ಮತ್ತು ಡಾ.ಭರತ್ ಶೆಟ್ಟಿ ಕೂಡಾ ಕೂಡಾ ಐವನ್ ಡಿಸೋಜಾ ವಿರುದ್ಧ ತರಾಟೆಗೈದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶಿಸಿ, ಅಧಿಕಾರಿ ಜತೆ ಮಾತನಾಡಿ, ಜ.31ರೊಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದರು.

ಗುರುಪುರ ಸೇತುವೆ ಕಾಮಗಾರಿ ಮೇ ತಿಂಗಳಲ್ಲಿ ಮುಗಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಇಂಜಿನಿಯರ್ ಯಶವಂ ಕುಮಾರ್ ಈ ಸಂದರ್ಭ ತಿಳಿಸಿದರು. ಮೂಡುಬಿದಿರೆ ಹೆದ್ದಾರಿ ದುರಸ್ತಿಗೆ ಟೆಂಡರ್ ಆಗಿದ್ದು, ಶೀಘ್ರ ಕಾಮಗಾರಿ ನಡೆಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಕ್ಸೆಕ್ಯುಟಿವ್ ಇಂಜಿನಿಯರ್ ವಿ.ಆರ್.ಸುಬ್ಬರಾಮ ಹೊಳ್ಳ ಹೇಳಿದರು.ಮೂಡುಬಿದಿರೆ ಹೆದ್ದಾರಿ ಚತುಷ್ಪಥ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿದ್ದು, ಅಂತಿಮ ಅಧಿಸೂಚನೆ ಹೊರಡಿಸಬೇಕಿದೆ ಎಂದು ವಿಶೇಷ ಭೂಸ್ವಾಧೀನ ಅಧಿಕಾರಿ ಮೇಘನಾ ಹೇಳಿದರು.

ಸಭೆಯಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ 20 ಕಿಂಡಿ ಅಣೆಕಟ್ಟು ನಿರ್ಮಾಣ, ಬಂಟ್ವಾಳ ಬೆಂಜನಪದವಿನಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣ, ಪಡುಮಲೆ ಅಭಿವೃದ್ಧಿ, ಮಳವೂರು ಕಿಂಡಿ ಅಣೆಕಟ್ಟು ಯೋಜನೆ, ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್ ನಿರ್ಮಾಣ ಯೋಜನೆಗಳ ಬಗ್ಗೆ ಸಚಿವರು ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧನಲಕ್ಷ್ಮೀ ಗಟ್ಟಿ, ಮಮತಾ ಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಪೊನ್ನುರಾಜ್, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಸೆಲ್ವಮಣಿ ಆರ್., ಎಸ್ಪಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News