ಉಡುಪಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ: ಹಲವೆಡೆ ತಪಾಸಣೆ
ಉಡುಪಿ, ಜ.20: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಜಿಲ್ಲೆಯ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಇಂದು ತಪಾಸಣೆ ಕಾರ್ಯ ನಡೆಸಿದರು.
ಇಂದ್ರಾಳಿ ರೈಲ್ವೆ ನಿಲ್ದಾಣ, ಮಲ್ಪೆ ಬೀಚ್, ಮೀನುಗಾರಿಕಾ ಬಂದರು, ಬಸ್ ನಿಲ್ದಾಣ ಹಾಗೂ ಕುಂದಾಪುರ, ಬೈಂದೂರು, ಕಾರ್ಕಳದ ಸಾರ್ವಜನಿಕ ಸ್ಥಳ ಗಳಲ್ಲಿ ಪೊಲೀಸರು ತಪಾಸಣೆ ಕಾರ್ಯ ನಡೆಸಿ, ಅನುಮಾನಸ್ಪದ ವಸ್ತುಗಳು ಕಂಡು ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸಿದರು.
ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರ ಸಹಕಾರದೊಂದಿಗೆ ಪೊಲೀಸರು ಶ್ವಾನದಳ, ಸ್ಪೋಟಕ ಪತ್ತೆ ಯಂತ್ರ (ಇವಿಡಿ)ದ ಮೂಲ ತಪಾಸಣೆ ನಡೆಸಿದರು. ಅದೇ ರೀತಿ ವಿದ್ವಂಸಕ ಕೃತ್ಯ ಪತ್ತೆ ದಳ ಕೂಡ ತಪಾಸಣೆ ನಡೆಸಿದೆ. ಸಂಶಯಾಸ್ಪದ ಸಾಮಾನುಗಳು ಕಂಡು ಬಂದರೆ ಸಾರ್ವಜನಿಕರು ಮುಟ್ಟದೆ, ಕೂಡಲೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ನಿಲ್ದಾಣದ ಧ್ವನಿವರ್ಧಕದ ಮೂಲಕ ಪ್ರಯಾಣಿಕರಿಗೆ ತಿಳಿಸಲಾಯಿತು.