ಕಾರು- ಸ್ಕೂಟರ್ ಢಿಕ್ಕಿ: ಮಹಿಳೆ ಮೃತ್ಯು
Update: 2020-01-20 16:22 GMT
ಕಾಪು, ಜ.20: ಕಾರೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉದ್ಯಾವರ ಗ್ರಾಮದ ಜೈಹಿಂದ್ ಕಟ್ಟಡದ ಹತ್ತಿರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜ.19ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಕಳತ್ತೂರು ನಿವಾಸಿ ಫರ್ಝಾನ್ ಎಂದು ಗುರುತಿಸಲಾಗಿದೆ. ಸ್ಕೂಟರ್ ಸವಾರ ಮೃತರ ಪತಿ ಅಬ್ದುಲ್ ಹಮೀದ್ ಹಾಗೂ ಮಗಳು ಆಝೀಕಾ ಗಾಯಗೊಂಡಿದ್ದಾರೆ. ಇವರು ಮೂವರು ಸ್ಕೂಟರ್ನಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಮೂವರು ಗಾಯಗೊಂಡರು. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಫರ್ಝಾನ್ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಅಪರಾಹ್ನ ವೇಳೆ ಮೃತಪಟ್ಟರು.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.