ಕನ್ನರ್ಪಾಡಿ ಶ್ರೀಜಯದುರ್ಗಾಪರಮೇಶ್ವರಿ ದೇವಳದ ಜೀರ್ಣೋದ್ದಾರ

Update: 2020-01-20 16:28 GMT

ಉಡುಪಿ, ಜ.20: ಇಲ್ಲಿನ ಕಡೆಕಾರು ಗ್ರಾಮದ ಕನ್ನರ್ಪಾಡಿಯಲ್ಲಿರುವ ಪುರಾಣಪ್ರಸಿದ್ಧ ಶ್ರೀಜಯದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯನ್ನು ಹೊರತು ಪಡಿಸಿ ಉಳಿದಂತೆ ಸಮಗ್ರ ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿದ್ದು, ಮುಂದಿನ ಮಾ.30ರಂದು ಬ್ರಹ್ಮಕುಂಭಾಭಿಷೇಕ ನಡೆಸುವ ಸಂಕಲ್ಪ ಮಾಡಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಳದ ಸುತ್ತು ಪೌಳಿಯು ಶಿಥಿಲವಾಗಿದ್ದು, ಇದರೊಂದಿಗೆ ತೀರ್ಥಮಂಟಪ, ಧ್ವಜಸ್ತಂಭಕ್ಕೆ ಬೆಳ್ಳಿಕವಚ ನಿರ್ಮಾಣ, ಸುತ್ತುಪೌಳಿ, ಅಗ್ರಸಭೆ, ಸುಬ್ರಹ್ಮಣ್ಯ ಗುಡಿ, ನಂದಿಕೋಣಗುಡಿ, ವಸಂತ ಮಂಟಪ, ನಾಗಸಾನಿಧ್ಯ, ರಕ್ತೇಶ್ವರಿ, ಒಳಾಂಗಣ ಹಾಗೂ ಹೊರಾಂಗಣ, ರಾಜಗೋಪುರ, ಸ್ವಾಗತಗೋಪುರ, ಅಡುಗೆ ಮನೆ, ಸಮುದಾಯ ಭವನ, ಆವರಣ ಗೋಡೆ, ಬಯಲು ರಂಗಮಂಟಪದ ಜೀರ್ಣೋದ್ಧಾರ ಕಾರ್ಯಗಳು ಸುಮಾರು 15 ಕೋಟಿ ರೂ.ವೆಚ್ಚದಲ್ಲಿ ನಡೆಯಲಿದೆ. ಇದರೊಂದಿಗೆ ಕಣ್ಣಪುಷ್ಕರಣೆ ಸರೋವರದ ಸಂಪೂರ್ಣ ನವೀಕರಣ ಕಾರ್ಯವೂ ಪ್ರಾರಂಭ ಗೊಂಡಿದೆ ಎಂದರು.

ಇದಕ್ಕಾಗಿ ಗ್ರಾಮದ ಹತ್ತು ಸಮಸ್ತರ ಹಾಗೂ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗಳನ್ನು ರಚಿಸಲಾಗಿದೆ. ಸುಮಾರು 5000 ವರ್ಷಗಳ ಇತಿಹಾಸವಿರುವ ಈ ದೇವಳದ ಜೀರ್ಣೋದ್ಧಾರ ಕಾರ್ಯಕ್ಕೆ ಹಲವು ದಾನಿಗಳು ಸಹಾಯಹಸ್ತ ಚಾಚಿದ್ದು, ಸಾರ್ವಜನಿಕರಿಂದಲೂ ನೆರವನ್ನು ಯಾಚಿಸುತ್ತೇವೆ ಎಂದು ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು.

ಈ ನಡುವೆ ಇದೇ ಜ.22ರಂದು ಜಯದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೂತನ ಕೊಡಿಮರ ಸಮರ್ಪಣೆಯಂಗವಾಗಿ ಬೃಹತ್ ಕೊಡಿಮರದ (70ಅಡಿ ಉದ್ದ) ಮೆರವಣಿಗೆ ಸಂಜೆ 5ಗಂಟೆಗೆ ನಡೆಯಲಿದೆ ಎಂದೂ ಅವರು ಹೇಳಿದರು.ಸುಳ್ಯ ತಾಲೂಕು ಪಂಜ ಸಮೀಪದ ಎಣ್ಮೂರು ಗ್ರಾಮದಿಂದ ಬರುವ ಈ ಕೊಡಿಮರವನ್ನು ಜೋಡುಕಟ್ಟೆಯಿಂದ ವೈಭವದ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಗುವುದು. ಇದರಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಎನ್.ಮುರಳೀಧರ ಬಲ್ಲಾಳ್, ಸಂಜೀವ ಎ., ಟಿ.ಸುಕುಮಾರ್, ಅರ್ಚಕ ರಾದ ಗುರುರಾಜ ಉಪಾಧ್ಯ, ನವೀನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News