ಕಳವು ಪ್ರಕರಣ : ಮೂವರು ಆರೋಪಿಗಳ ಬಂಧನ
Update: 2020-01-20 17:08 GMT
ಮೂಡುಬಿದಿರೆ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಕಳ್ಳತನ ನಡೆಸಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ವಾಮಂಜೂರಿನ ಆರಿಫ್ (25), ಕಳವಾರು ಕುರ್ಸುಗುಡ್ಡೆಯ ಮಹಮ್ಮದ್ ಮುನೀರ್(23) ಹಾಗೂ ಆರಿಫ್(29) ಬಂಧಿತ ಆರೋಪಿಗಳು.
ಈ ಮೂವರು ಇತ್ತೀಚೆಗೆ ಮೂಡುಬಿದಿರೆ ಪರಿಸರದ ಹೊಸಬೆಟ್ಟು ಸೊಸೈಟಿ, ಅಂಚೆ ಕಚೇರಿ, ಪುತ್ತಿಗೆ, ನೆಲ್ಲಿಕಾರು, ಮಾಂಟ್ರಾಡಿ, ದರೆಗುಡ್ಡೆ, ಪಣಪಿಲ ಮುಂತಾದ ಕಡೆಗಳಲ್ಲಿ ರಾತ್ರಿ ಕಳ್ಳತನ ನಡೆಸಿ ಪರಾರಿಯಾಗಿದ್ದರು.
ಖಚಿತ ಮಾಹಿತಿ ಮೇರೆಗೆ ಕಮೀಷನರ್ ಸೂಚನೆಯಂತೆ ಮೂಡುಬಿದಿರೆ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಬಿ.ಎಸ್. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂವರು ಆರೋಪಿಗಳ ವಿರುದ್ಧ ಮೂಡುಬಿದಿರೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.