ಸಮಾಜದಲ್ಲಿ ಬದುಕಲು ಕ್ರೈಸ್ತರಿಗೆ ಹಲವು ಸವಾಲುಗಳು: ಮಾರ್ಗರೇಟ್ ಆಳ್ವಾ

Update: 2020-01-21 14:30 GMT

ಉಡುಪಿ, ಜ.21: ದೇಶದ ಅಭಿವೃದ್ಧಿಗೆ ಕ್ರೈಸ್ತರ ಕೊಡುಗೆ ಅಪಾರವಾದುದು. ಆಸ್ಪತ್ರೆ, ವಿದ್ಯಾಸಂಸ್ಥೆಗಳು, ಆಶ್ರಮಗಳನ್ನು ಆರಂಭಿಸಿ ದೇಶ ಅಭಿವೃದ್ಧಿ ಹೊಂದಲು ಕಾರಣರಾಗಿರುವ ಈ ಸಮುದಾಯ ಪ್ರಸ್ತುತ ಈ ಸಮಾಜದಲ್ಲಿ ಬದುಕಲು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಹೇಳಿದ್ದಾರೆ.

ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯ ವ್ಯಾಪ್ತಿಯ ಭಾರತೀಯ ಕೆಥೋಲಿಕ್ ಯುವ ಸಂಚಲನ ಐಸಿವೈಎಂ ಉದ್ಯಾವರ ಘಟಕದ ಸುವರ್ಣ ಮಹೋತ್ಸವವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು.

ಇಂದಿನ ಸಮಾಜಕ್ಕೆ ನಮ್ಮ ಯುವಕರ ಅಗತ್ಯವಿದೆ. ಯುವಕರು ಇಂದಿನ ಸಮಾಜದಲ್ಲಿ ಯಾವ ರೀತಿ ಜೀವಿಸುತ್ತಾರೊ, ಅದರ ಮೇಲೆ ನಮ್ಮ ಸಮಾಜದ ಭವಿಷ್ಯ ರೂಪಿತವಾಗಿದೆ. ಯುವಕರು ಸಮಾಜದಲ್ಲಿ ಮುನ್ನಡೆಯುವಾಗ ಸವಾಲುಗಳನ್ನು ಎದುರಿಸ ಬೇಕಾಗುತ್ತದೆ. ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸಿ, ಜಾತಿ ಮತ ಭೇದವಿಲ್ಲದೆ, ಕಷ್ಟದಲ್ಲಿರುವವರ ಸೇವೆಯನ್ನು ಮಾಡು ವುದರೊಂದಿಗೆ ಸಮಾಜವನ್ನು ಕಟ್ಟಬೇಕು ಮತ್ತು ಯುವ ಶಕ್ತಿಯ್ನು ಬಲಿಷ್ಠ ಗೊಳಿಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮಾಧ್ಯಕ್ಷ ಅತೀ ವಂ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಇಂದಿನ ನಮ್ಮ ಯುವಜನರಲ್ಲಿ ಬಹಳಷ್ಟು ಬಲವಿದೆ ಮತ್ತು ಪ್ರತಿಭೆಗಳಿವೆ. ಯುವಜನರು ಪರದೆ ಹಿಂದೆ ನಿಂತು ತಮ್ಮ ಜೀವನ ರೂಪಿತ ಮಾಡಬಾರದು. ಸ್ವತಂತ್ರವಾಗಿ ಕನಸನ್ನು ಕಾಣಬೇಕು ಮತ್ತು ಆ ಕನಸು ನನಸಾಗಲು ಪ್ರಯತ್ನ ಮಾಡಬೇಕು. ಕಷ್ಟದಲ್ಲಿದ್ದಾಗ ಮತ್ತು ನೋವಿ ನಲ್ಲಿರುವವರಿಗೆ ಸ್ಪಂದಿಸುವ ಯುವಜನತೆ ಈ ದೇಶದ ಭವಿಷ್ಯವಾಗುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಐವತ್ತು ವರ್ಷಗಳಲ್ಲಿ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ನಿರ್ದೇಶಕರುಗಳನ್ನು ಸನ್ಮಾನಿಸ ಲಾಯಿತು. 1971ರಲ್ಲಿ ಸಿವೈಎಂ ಸಂಘಟನೆಯನ್ನು ಮೊದಲಾಗಿ ಉದ್ಯಾವರ ದೇವಾಲಯದಲ್ಲಿ ಪರಿಚಯಿಸಿದ ಅಂದಿನ ಸಹಾಯಕ ಧರ್ಮಗುರು ವಂ. ಫಾ.ಹೆನ್ರಿ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ.ಫಾ ವಲೇರಿಯನ್ ಮೆಂಡೋನ್ಸಾ, ಸ್ಥಾಪಕ ನಿರ್ದೇಶಕ ವಂ.ಫಾ.ಹೆನ್ರಿ ಫೆರ್ನಾಡಿಸ್, ದೇವಾಲಯದ ಸಹಾಯಕ ಧರ್ಮಗುರು ವಂದನೀಯ ಫಾ.ರಾಲ್ವಿನ್ ಆರನ್ನ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ, ಕರ್ನಾಟಕ ಪ್ರಾಂತೀಯ ಯುವ ಆಯೋಗದ ಅಧ್ಯಕ್ಷ ಜೈಸನ್ ಪಿರೆರಾ ಮುಖ್ಯ ಅತಿಥಿ ಗಳಾಗಿದ್ದರು.

ಪಾಲನಾ ಮಂಡಳಿ ಉಪಾಧ್ಯಕ್ಷ ಮೆಲ್ವಿನ್ ನೊರನ್ನ, ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ನೊರ್ಬಟ್ ಕ್ರಾಸ್ಟಾ, ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ, ಐಸಿವೈಎಂ ಉದ್ಯಾವರ ಘಟಕಾಧ್ಯಕ್ಷ ರೊಯಲ್ ಕಾಸ್ತೆಲಿನೋ, ಕಾರ್ಯದರ್ಶಿ ಪ್ರಿಯಾಂಕಾ ಡಿಸೋಜಾ ಉಪಸ್ಥಿತರಿದ್ದರು.

ದೇವಾಲಯದ ಪ್ರಧಾನ ಧರ್ಮಗುರು ವಂ.ಫಾ.ಸ್ಟ್ಯಾನಿ ಬಿ.ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡೋರಾ ಅರೋಜಾ ವಂದಿಸಿದರು. ಐಸಿವೈಎಂ ಸದಸ್ಯರಾದ ಜೆನ್ ಡಿಸೋಜ ಮತ್ತು ಎಲ್ಸನ್ ಅಂದ್ರಾದೆ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬೆವಾರಿಸ್ ಕೊಂಕಣಿ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಉದ್ಘಾಟನಾ ಸಮಾರಂಭದ ಮೊದಲು ಸುವರ್ಣ ಮಹೋತ್ಸವದ ಸಂಭ್ರಮದ ದಿವ್ಯ ಬಲಿಪೂಜೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News