ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದ ಸಂಪೂರ್ಣ ಕೇಸರಿ ಬಾವುಟ ಅನಾವರಣ
ಮುಂಬೈ, ಜ. 23: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನೂತನ ಬಾವುಟವನ್ನು ಪಕ್ಷದ ವರಿಷ್ಠ ರಾಜ್ ಠಾಕ್ರೆ ಗುರುವಾರ ಅನಾವರಣಗೊಳಿಸಿದ್ದಾರೆ. ಕೇಸರಿ ಬಣ್ಣದ ಈ ಬಾವುಟ ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆಯನ್ನು ಒಳಗೊಂಡಿದೆ. ಈ ಬಾವುಟ ಪಕ್ಷ ಹೊಸದಿಕ್ಕಿನತ್ತ ಸಾಗುವ ಸೂಚನೆ ನೀಡಿದೆ. ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಈ ಹಿಂದೆ ಬಾವುಟ ಪಕ್ಷದ ಒಳಗೊಳ್ಳುವಿಕೆಯ ನೀತಿಯಂತೆ ಕೇಸರಿ, ನೀಲಿ, ಬಿಳಿ ಹಾಗೂ ಹಸಿರು ಬಣ್ಣವನ್ನು ಹೊಂದಿತ್ತು.
ಹೊಸ ಬಾವುಟದಲ್ಲಿ ನೀಲಿ, ಬಿಳಿ ಹಾಗೂ ಹಸಿರು ನಾಪತ್ತೆಯಾಗಿದೆ. ಶಿವಾಜಿ ಆಡಳಿತದಲ್ಲಿ ಬಳಸಲಾಗುತ್ತಿದ್ದ ರಾಜಮುದ್ರೆಯನ್ನು ಬಾವುಟದ ಮಧ್ಯದಲ್ಲಿ ಉಬ್ಬು ಚಿತ್ರದ ಮೂಲಕ ಮುದ್ರಿಸಲಾಗಿದೆ.
ಹಳೆಯ ಬಾವುಟದಲ್ಲಿ ಕೂಡ ಇತರ ಬಣ್ಣಕ್ಕಿಂತ ಕೇಸರಿ ಬಣ್ಣ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿಕೊಂಡಿತ್ತು. ನೂತನ ಸಂಪೂರ್ಣ ಕೇಸರಿ ಬಾವುಟ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಶಿವಸೇನೆಯ ಸ್ಥಾಪಕ ಬಾಳ ಠಾಕ್ರೆ ಅವರ ಹಿಂದುತ್ವದ ಸಿದ್ಧಾಂತದತ್ತ ಸಾಗುತ್ತಿರುವುದಕ್ಕೆ ಸೂಚನೆ ನೀಡಿದೆ.