ಎನ್‌ಪಿಆರ್ ದಾಖಲೆಯ ಗೊಂದಲ: ಬ್ಯಾಂಕ್ ಖಾತೆ ಮುಚ್ಚಲು ಸರತಿ ಸಾಲಲ್ಲಿ ನಿಂತ ಗ್ರಾಮಸ್ಥರು

Update: 2020-01-23 17:14 GMT

ಚೆನ್ನೈ, ಜ.23: ತಮಿಳುನಾಡಿನಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದಿನಪತ್ರಿಕೆಯಲ್ಲಿ ಪ್ರಕಟಿಸಿದ ಅಧಿಸೂಚನೆಯಲ್ಲಿದ್ದ ಎನ್‌ಪಿಆರ್ ಉಲ್ಲೇಖದಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿ ಬ್ಯಾಂಕ್‌ನ ಖಾತೆಗಳನ್ನು ಮುಚ್ಚಿದ ಘಟನೆ ನಡೆದಿದೆ. ತೂತುಕುಡಿ ಜಿಲ್ಲೆಯಲ್ಲಿರುವ ಕಾಯಲಪಟ್ಟಿನಂ ಎಂಬ ಗ್ರಾಮದಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ದಿನಪತ್ರಿಕೆಯಲ್ಲಿ ಪ್ರಕಟಿಸಿದ ಸೂಚನೆಯಲ್ಲಿ ಬ್ಯಾಂಕ್‌ನ ಗ್ರಾಹಕರು ತಮ್ಮ ಕೆವೈಸಿ( ನಿಮ್ಮ ಗ್ರಾಹಕರನ್ನು ಅರಿಯಿರಿ) ದಾಖಲೆಯನ್ನು ಶೀಘ್ರವೇ ಬ್ಯಾಂಕ್‌ಗೆ ಸಲ್ಲಿಸುವಂತೆ ತಿಳಿಸಿದೆ. ಕೆವೈಸಿ ಪುರಾವೆಗೆ ಸ್ವೀಕಾರಾರ್ಹ ದಾಖಲೆಗಳಲ್ಲಿ ಎನ್‌ಪಿಆರ್(ರಾಷ್ಟ್ರೀಯ ಜನಸಂಖ್ಯೆ ನೋಂದಣಿ)ಯನ್ನೂ ಸೇರಿಸಲಾಗಿದೆ. ಈ ಸೂಚನೆ ವಿವಾದಾತ್ಮಕ ಪೌರತ್ವ ಕಾಯ್ದೆಗೆ ಸಂಬಂಧಿಸಿದ್ದು ಎಂಬ ಮಾತು ಸ್ಥಳೀಯರಲ್ಲಿ ಪ್ರಸಾರವಾಗಿದೆ. ಇದರಿಂದ ಗಲಿಬಿಲಿಗೊಂಡ ಗ್ರಾಮಸ್ಥರು(ಇವರಲ್ಲಿ ಬಹುತೇಕರು ಮುಸ್ಲಿಮರು) ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಯನ್ನು ಮುಚ್ಚಲು ಬ್ಯಾಂಕ್‌ನ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ವರದಿಯಾಗಿದೆ.

ಜನವರಿ 20ರಿಂದ ಜನವರಿ 22ರವರೆಗಿನ ಅವಧಿಯಲ್ಲಿ ಬ್ಯಾಂಕ್‌ನ ಶಾಖೆಯಿಂದ ಸುಮಾರು 4 ಕೋಟಿ ರೂ. ಮೊತ್ತವನ್ನು ಗ್ರಾಹಕರು ಹಿಂಪಡೆದಿದ್ದಾರೆ. ಅಧಿಸೂಚನೆಯಿಂದ ಹೆದರಿದ ಕೆಲವು ಗ್ರಾಹಕರು ಖಾತೆಯಲ್ಲಿದ್ದ ಎಲ್ಲಾ ಹಣವನ್ನೂ ಬರಿದುಗೊಳಿಸಿದ್ದಾರೆ. ತಮಗೆ ಸೆಂಟ್ರಲ್ ಬ್ಯಾಂಕ್ ಅಥವಾ ಇತರ ಬ್ಯಾಂಕ್‌ನ ಅಧಿಕಾರಿಗಳೊಂದಿಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ ಕೆವೈಸಿಗೆ ಎನ್‌ಪಿಆರ್ ಪುರಾವೆ ಎಂಬ ಬ್ಯಾಂಕ್‌ನ ಅಧಿಸೂಚನೆ ಎಲ್ಲರಲ್ಲೂ ಗಾಬರಿಗೆ ಕಾರಣವಾಗಿದೆ ಎಂದು ಕಾಯಲ್‌ಪಟ್ಟಿನಂನಲ್ಲಿ ವಕೀಲರಾಗಿರುವ ಅಹ್ಮದ್ ಸಾಹಿಬ್ ಎಂಬವರು ಹೇಳಿದ್ದಾರೆ. ತಾನು ಬ್ಯಾಂಕ್‌ನಿಂದ 3.50 ಲಕ್ಷ ಹಣ ವಾಪಾಸು ಪಡೆದಿದ್ದೇನೆ. ತನ್ನ ನೆರೆಹೊರೆಯವರಲ್ಲಿ ಕೆಲವರು ಬ್ಯಾಂಕ್‌ನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದರು. ಆದರೆ ಎಲ್ಲರೂ ಖಾತೆಯನ್ನು ಮುಚ್ಚಿದ್ದಾರೆ ಎಂದವರು ಹೇಳಿದ್ದಾರೆ.

ಈ ಹಿಂದೆಯೂ ಕೆವೈಸಿಗೆ ದಾಖಲೆ ಪತ್ರ ಒದಗಿಸುವಂತೆ ಬ್ಯಾಂಕ್ ಸೂಚಿಸಿತ್ತು. ಆದರೆ ಈ ಬಾರಿ ಎನ್‌ಪಿಆರ್ ಅನ್ನೂ ದಾಖಲೆಪತ್ರಗಳಲ್ಲಿ ಸೇರಿಸಿದ್ದು ಆತಂಕಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಬ್ಯಾಂಕ್‌ನಿಂದ ಹಣ ಹಿಂಪಡೆಯುವವರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಂಡ ಬ್ಯಾಂಕ್‌ನವರು ಈಗ ಮನೆಮನೆಗೆ ಭೇಟಿ ನೀಡಿ ಗ್ರಾಹಕರ ಆತಂಕವನ್ನು ದೂರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಎನ್‌ಪಿಆರ್ ಸೂಕ್ಷ್ಮ ವಿಷಯವಾದ ಕಾರಣ ಸ್ಥಳೀಯರಲ್ಲಿ ಆತಂಕ ಮೂಡಿದೆ. ಪರಿಸ್ಥಿತಿ ಇನ್ನೂ ಸಹಜತೆಗೆ ಮರಳಿಲ್ಲ. ಇದೀಗ ಪರಿಸರದಲ್ಲಿ ಪೋಸ್ಟರ್ ಅಂಟಿಸಿ ಸ್ಥಳೀಯರಲ್ಲಿ ಅರಿವು ಮೂಡಿಸಲು ಮತ್ತು ಎನ್‌ಪಿಆರ್ ಕಡ್ಡಾಯವಲ್ಲ, ಐಚ್ಛಿಕ ದಾಖಲೆ ಎಂದು ಅವರಿಗೆ ತಿಳಿಹೇಳಲಾಗುತ್ತಿದೆ. ಅಲ್ಲದೆ ಆಟೋದಲ್ಲಿ ಸ್ಪೀಕರ್ ಮೂಲಕ ಜನರಿಗೆ ತಿಳಿಹೇಳಲಾಗುತ್ತಿದೆ ಎಂದು ಸೆಂಟ್ರಲ್ ಬ್ಯಾಂಕ್‌ನ ಅಧಿಕಾರಿಗಳು ಹೇಳಿದ್ದಾರೆ.

ಬ್ಯಾಂಕ್‌ನ ಗ್ರಾಹಕರಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಅಧಿಕಾರಿಗಳು ಜಮಾತ್ ಸಂಘಟನೆಯವರನ್ನು ಭೇಟಿಯಾಗಿ ಸಮುದಾಯದ ಸದಸ್ಯರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದಾರೆ. ಕೆವೈಸಿಗೆ ಎನ್‌ಪಿಆರ್ ದಾಖಲೆ ಅತ್ಯಗತ್ಯವಲ್ಲ. ಆಧಾರ್ ಅಥವಾ ಪ್ಯಾನ್ ಕಾರ್ಡ್‌ಗಳು ಬ್ಯಾಂಕ್ ಖಾತೆ ಆರಂಭಿಸಲು ಅಥವಾ ಖಾತೆ ನಿರ್ವಹಿಸಲು ಕಾನೂನು ಸಮ್ಮತವಾದ ದಾಖಲೆಗಳಾಗಿವೆ. ಈ ಬಗ್ಗೆ ಆರ್‌ಬಿಐ ಕಾನೂನು ಸ್ಪಷ್ಟವಾಗಿದೆ ಎಂದು ಕೆನರಾ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಸಿಇಒ ಶಂಕರನಾರಾಯಣನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News