ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ತೇಜೋವಧೆ ಆರೋಪ: ದೂರು

Update: 2020-01-23 17:51 GMT

ಪುತ್ತೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಹೆಸರಿನಲ್ಲಿ ಪುತ್ತೂರಿನ ಯುವಕನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣ ಬುಧವಾರ ನಡೆದಿದ್ದು, ಇದರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.

ಬಿಜೆಪಿ ಕಾರ್ಯಕರ್ತ, ಪುತ್ತೂರಿನ ಸಂದೀಪ್ ಲೋಬೋ ಎಂಬ ಯುವಕ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.

ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋದಲ್ಲಿ ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಸಂದೀಪ್ ಲೋಬೋ ಇಬ್ಬರೂ ಆರೆಸ್ಸೆಸ್ ಗಣವೇಷ ಧರಿಸಿಕೊಂಡು ಅಕ್ಕಪಕ್ಕದಲ್ಲಿ ನಿಂತಿದ್ದರು. ಈ ಫೋಟೋವನ್ನು ವೈರಲ್ ಮಾಡಿದವರು, "ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆದಿತ್ಯ ರಾವ್ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಜತೆಯಲ್ಲಿ' ಎಂಬ ಒಕ್ಕಣೆ ಸೃಷ್ಟಿಸಿದ್ದರು.

ಇದರ ವಿರುದ್ಧ ಸಂದೀಪ್ ಲೋಬೋ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News