ಸಹ ಶಿಕ್ಷಕನಿಂದಲೇ ಶಿಕ್ಷಕಿಯ ಕೊಲೆ: ಕ್ರೈಂ ಬ್ರಾಂಚ್ ತನಿಖೆಯಿಂದ ಬಹಿರಂಗ
ಕಾಸರಗೋಡು, ಜ.24: ಇಲ್ಲಿನ ಮೀಯಪದವು ವಿದ್ಯಾವಿರ್ಧಕ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ ರೂಪಾಶ್ರೀ(44)ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹ ಶಿಕ್ಷಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಶಾಲೆಯ ಡ್ರಾಯಿಂಗ್ ಶಿಕ್ಷಕ ವೆಂಕಟರಮಣ ಕಾರಂತ (50) ಮತ್ತು ಕಾರು ಚಾಲಕ ನಿರಂಜನ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಜ.14ರಂದು ಸಂಜೆಯಿಂದ ನಾಪತ್ತೆಯಾಗಿದ್ದ ರೂಪಾಶ್ರೀ ಅವರ ಮೃತದೇಹವು ಜ.16ರಂದು ಕುಂಬಳೆ ಸಮೀಪದ ಪೆರುವಾಡು ಕಡಲ ತೀರದಲ್ಲಿ ಪತ್ತೆಯಾಗಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದರು. ಆದರೆ ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಾಗರಿಕರು, ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು. ಕೊನೆಗೂ ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಿದ್ದರು.
ಕ್ರೈಮ್ ಬ್ರಾಂಚ್ ಮೂರು ದಿನಗಳಲ್ಲೇ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೂಪಾಶ್ರೀ ಶಿಕ್ಷಕಿಯಾಗಿರುವ ಅದೇ ಶಾಲೆಯಲ್ಲಿ ಶಿಕ್ಷಕನಾಗಿದ್ದ ವೆಂಕಟ್ರಮಣ ಈ ಕೃತ್ಯ ನಡೆಸಿದ್ದು, ಜ.14ರಂದು ರೂಪಾಶ್ರೀಯನ್ನು ಮನೆಗೆ ಕರೆಸಿ ಬಕೆಟ್ನಲ್ಲಿ ಮುಖ ಮುಳುಗಿಸಿ ಕೊಲೆಗೈದಿದ್ದು, ಬಳಿಕ ಮೃತದೇಹವನ್ನು ನಿರಂಜನ್ನ ಸಹಾಯದಿಂದ ಕಾರಿನಲ್ಲಿ ಹೊಳೆಗೆ ಕೊಂಡೊಯ್ದು ಎಸೆದಿದ್ದರೆನ್ನಲಾಗಿದೆ.
ಕ್ರೈಂ ಬ್ರಾಂಚ್ ಪೊಲೀಸರು, ಫಾರೆನ್ಸಿಕ್ ತಜ್ಞರು ಮನೆ ಮತ್ತು ಕಾರನ್ನು ತಪಾಸಣೆ ನಡೆಸಿದಾಗ ಕಾರಿನ ಢಿಕ್ಕಿಯಿಂದ ರೂಪಾಶ್ರೀಯ ತಲೆಕೂದಲು ಲಭಿಸಿದ್ದು, ಈ ಹಿನ್ನೆಲೆಯಲ್ಲಿ ವೆಂಕಟರಮಣ ನನ್ನು ಹೆಚ್ಚಿನ ತನಿಖೆಗೊಳಪಡಿಸಿದಾಗ ತಾನೇ ಕೊಲೆಗೈದುದಾಗಿ ಬಾಯ್ಬಿಟ್ಟಿದ್ದಾನೆ.
ರೂಪಾಶ್ರೀ ಮತ್ತು ವೆಂಕಟರಮಣ ನಡುವೆ ಸ್ನೇಹ ಇತ್ತು ಎನ್ನಲಾಗಿದೆ. ಆರ್ಥಿಕ ಹಾಗೂ ಇನ್ನಿತರ ವ್ಯವಹಾರಗಳು ನಡೆದಿದ್ದವು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಸ್ನೇಹ, ವ್ಯವಹಾರ ಬಳಿಕ ರೂಪಾಶ್ರೀಗೆ ಹೊರೆಯಾಗಿ ಪರಿಣಮಿಸಿತ್ತು. ಕೆಲ ಸಮಯದಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಈ ಕೃತ್ಯ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಕೊಲೆಗೆ ಬೇರೆ ಯಾವುದಾದರೂ ಕಾರಣದ ಬಗ್ಗೆ ತನಿಖೆಯಿಂದ ಸ್ಪಷ್ಟಗೊಳ್ಳಬೇಕಿದೆ ಎಂದು ತನಿಖಾ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.
ರೂಪಾಶ್ರೀ ನಾಪತ್ತೆಯಾದ ದಿನದಿಂದಲೇ ಮಂಜೇಶ್ವರ ಪೊಲೀಸರಿಗೆ ಲಭಿಸಿದ ದೂರಿನಂತೆ ವೆಂಕಟರಮಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ಯಾವುದೇ ಸುಳಿವು ಈತನಿಂದ ಲಭಿಸಿರಲಿಲ್ಲ. ಬಳಿಕ ಮೃತದೇಹ ಪತ್ತೆಯಾದ ದಿನವೂ ವಿಚಾರಣೆಗೆ ಒಳಪಡಿಸಲಾಗಿತ್ತು ಆದರೂ ಈತನ ಭಾಗಿಯಾದ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ವಿಫಲಗೊಂಡಿದ್ದರು.
ಕೊನೆಗೆ ಕ್ರೈಂ ಬ್ರಾಂಚ್ ತನಿಖೆಯಿಂದ ಕೃತ್ಯ ಬಯಲಿಗೆ ಬರುವಂತೆ ಮಾಡಿದೆ.