ಹಿಂದೂ ಹೆಸರಿನಲ್ಲಿ ಬ್ರಾಹ್ಮಣ ರಾಷ್ಟ್ರ ಸ್ಥಾಪನೆಗೆ ಷಡ್ಯಂತ್ರ: ಪ್ರೊ. ತುಕರಾಮ್‌

Update: 2020-01-25 15:28 GMT

ಉಡುಪಿ, ಜ. 25: ಈ ದೇಶದಲ್ಲಿ ಒಂದು ಗ್ರಾಪಂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗದ ಶೇ.3ರಷ್ಟಿರುವ ಬ್ರಾಹ್ಮಣರು ಇಂದು ಇಡೀ ಸಂಸತ್ತನ್ನೇ ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಹಿಂದೂಗಳು ಅಲ್ಲದಿದ್ದರೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಸ್ಥಾಪಿಸುವ ಹೆಸರಿನಲ್ಲಿ ಬ್ರಾಹ್ಮಣ ರಾಷ್ಟ್ರ ಸ್ಥಾಪಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಭಾರತೀಯ ಮುಕ್ತಿ ಮೊರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ. ವಿಲಾಸ್ ತುಕರಾಮ್ ಆರೋಪಿಸಿದ್ದಾರೆ.

ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಉಡುಪಿ ಜಿಲ್ಲೆ ಇದರ ವತಿಯಿಂದ ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಮಸೂದೆಯ ವಿರುದ್ಧ ಉಡುಪಿ ಮಿಷನ್ ಕಂಪೌಂಡ್ ಮೈದಾನದಲ್ಲಿ ಶನಿವಾರ ಆಯೋಜಿಸಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಸಿಎಎ, ಎನ್‌ಆರ್‌ಸಿ ಪೌರತ್ವ ನೀಡುವ ಕಾಯ್ದೆಗಳಲ್ಲ. ಬದಲು ನಮ್ಮಲ್ಲಿ ರುವ ಪೌರತ್ವವನ್ನು ಕಿತ್ತುಕೊಳ್ಳುವ ಕಾಯ್ದೆಯಾಗಿದೆ. ಆದುದರಿಂದ ಈ ಕಾಯ್ದೆಯನ್ನು ಕೇವಲ ಮುಸ್ಲಿಮರು ಮಾತ್ರವಲ್ಲ, ಎಲ್ಲ ಭಾರತೀಯರು ಕೂಡ ವಿರೋಧಿಸಬೇಕಾಗಿದೆ. ಇವರು ಈ ದೇಶವನ್ನು ಮತ್ತೊಮ್ಮೆ ಧರ್ಮದ ಆಧಾರ ದಲ್ಲಿ ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಅವರು ದೂರಿದರು.

ಈ ದೇಶದಲ್ಲಿ 2000ಕ್ಕೂ ಅಧಿಕ ಜಾತಿಗಳಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಹಿಂದೂಗಳಲ್ಲ. ರಾಮಾಯಣ, ಮಹಾಭಾರತ, ಭಗದ್ಗೀತೆಗಳಲ್ಲಿ ಎಲ್ಲೂ ಕೂಡ ಹಿಂದೂ ಪದ ಬಳಕೆ ಆಗುತ್ತಿಲ್ಲ. ಹಿಂದೂ ಎಂಬುದು ಪರ್ಶಿಯನ್ ಪದ ಆಗಿದೆ ಎಂದ ಅವರು, ಶೇ.3ರಷ್ಟಿರುವ ಬ್ರಾಹ್ಮಣರು ಇಂದು ಈ ದೇಶದ ಸಂಸತ್ತ್, ನ್ಯಾಯಾಂಗ, ಮಾಧ್ಯಮಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಭಾರತೀಯ ಪೌರತ್ವವನ್ನು ದಾಖಲೆಗಳ ಆಧಾರದ ಬದಲು ಡಿಎನ್‌ಎ ಪರೀಕ್ಷೆಯ ಮೂಲಕ ಪರೀಕ್ಷೆಗೆ ಸಾಬೀತು ಪಡಿಸಬೇಕು. ಇದರಿಂದ ರಕ್ತದಲ್ಲಿ ಈ ಮಣ್ಣಿನ ಗುಣ ಹೊಂದಿರುವ ನಾವೇ ನಿಜವಾದ ಭಾರತೀಯರು ಎಂಬುದು ಗೊತ್ತಾಗುತ್ತದೆ. ಇವರೆಲ್ಲ ಹೊರಗಿನಿಂದ ಬಂದವರು ಎಂಬುದು ಸಾಬೀತಾಗುತ್ತದೆ ಎಂದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಅಂದು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತರಾಗಲು ಮೊದಲ ಸ್ವಾತಂತ್ರ ಸಂಗ್ರಾಮ ನಡೆಸಿದರೆ, ಇಂದು ಅಂದಿನ ಬ್ರಿಟೀಷರ ಪಾದ ಸೇವೆ ಮಾಡುತ್ತ, ಈಗ ಅದಾನಿ, ಅಂಬಾನಿಯವರ ಗುಲಾಮರಾಗಿರುವ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡುತ್ತಿರುವ ನಮ್ಮ ಆಳುವವರಿಂದ ಮುಕ್ತರಾಗಲು ಎರಡನೆ ಸ್ವಾತಂತ್ರ ಸಂಗ್ರಾಮವನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೂಡ್ಲಿಪೇಟೆ ದಿಕ್ಸೂಚಿ ಭಾಷಣ ಮಾಡಿದರು. ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫಾನ್ಸೋ ಫ್ರಾಂಕೋ, ಹಿರಿಯ ಚಿಂತಕ ಜಿ.ರಾಜಶೇಖರ್, ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಬಿ.ಆರ್.ಭಾಸ್ಕರ ಪ್ರಸಾದ್, ಧರ್ಮಗುರು ಫಾ.ವಿಲಿಯಮ್ ಮಾರ್ಟಿಸ್, ಪತ್ರಕರ್ತ ಶಶಿಧರ ಹೆಮ್ಮಾಡಿ, ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ ಮಾತನಾಡಿದರು.

ಸಭೆಯಲ್ಲಿ ಮಿತ್ತೂರ್ ಕೆಜಿಎನ್ ದಾವಾ ಕಾಲೇಜಿನ ಹುಸೈನ್ ಅಹ್ಸಾನಿ, ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್, ಎಸ್‌ಡಿಪಿಐ ಗುಲ್ಬರ್ಗ ಜಿಲ್ಲಾಧ್ಯಕ್ಷ ಶಾಹೀದ್ ನಾಸಿರ್, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ತೌಫೀಕ್, ಪಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಉಡುಪಿ ಸಂಯುಕ್ತ ಜಮಾಅತ್ ಅಧ್ಯಕ್ಷ ಎಂ.ಅಬೂಬಕರ್, ತಬ್ಲಿಕ್ ಜಮಾಅತ್‌ನ ಖಾಲಿದ್ ಮಣಿಪುರ, ಎಸ್‌ಡಿ ಟಿಯು ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಇಮಾಮ್ ಕೌನ್ಸಿಲ್ ರಾಜ್ಯ ಸದಸ್ಯ ಮೌಶಿಮ್ ಮೌಲಾನ, ನ್ಯಾಯವಾದಿ ಹಂಝತ್ ಹೆಜಮಾಡಿ ಕೋಡಿ, ವಕ್ಫ್ ಜಿಲ್ಲಾ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಮಟಪಾಡಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಅಬ್ದುರ್ರಹ್ಮಾನ್ ಮಲ್ಪೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಇಲ್ಯಾಸ್ ಸಾಸ್ತಾನ ವಂದಿಸಿದರು. ಶಫೀಕ್ ಕಾರ್ಯಕ್ರಮ ನಿರೂಪಿಸಿದರು.

ಎನ್‌ಆರ್‌ಸಿ ಜೀವ ವಿರೋಧಿ ಕಾಯ್ದೆ: ಅಬ್ದುಲ್ ಮಜೀದ್‌

ಬೇರೆ ದೇಶಗಳಿಗಿಂತ ಭಾರತದಲ್ಲಿಯೇ ಅಲ್ಪಸಂಖ್ಯಾತರು, ದಲಿತರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಆದುದರಿಂದ ಸಿಎಎಯನ್ನು ನಾವು ವಿರೋಧಿ ಸುತ್ತೇವೆ. ಯಾರಿಗೂ ಪೌರತ್ವ ನೀಡಬೇಡಿ ಎಂಬುದಾಗಿ ನಾವು ಹೇಳುತ್ತಿಲ್ಲ. ಆದರೆ ಧರ್ಮದ ಆಧಾರದಲ್ಲಿ ಪೌರತ್ವ ನೀಡಬೇಡಿ ಎಂಬುದು ನಮ್ಮ ಆಗ್ರಹ ವಾಗಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಅಬ್ದುಲ್ ಮಜೀದ್ ಕೂಡ್ಲಿಪೇಟೆ ಹೇಳಿದರು.

ದೇಶದಲ್ಲಿರುವ 10.40ಕೋಟಿ ಆದಿವಾಸಿಗಳು ಹಾಗೂ 6.40ಕೋಟಿ ಸ್ಲಂ ನಿವಾಸಿಗಳಲ್ಲಿ ದಾಖಲೆಗಳೇ ಇಲ್ಲ. ಆದುದರಿಂದ ಎನ್‌ಆರ್‌ಸಿಯು ಬಡವರ, ಜನರ ಹಾಗೂ ಜೀವ ವಿರೋಧಿಯಾಗಿದೆ. ಎನ್‌ಪಿಆರ್ ಎಂಬುದು ಎನ್‌ಆರ್‌ಸಿಯನ್ನು ಹೊರಗಿನ ಬಾಗಿಲಿನ ಮೂಲಕ ಜಾರಿಗೆ ತರುವ ಪ್ರಕ್ರಿಯೆ ಯಾಗಿದೆ. ಇವರಿಗೆ ದೇಶದ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಉದ್ಯೋಗ ನೊಂದಾಣಿ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News