'ಪದ್ಮಶ್ರೀ' ಶಾಲೆಗೆ ಸಂದ ಗೌರವ: ಹರೇಕಳ ಹಾಜಬ್ಬ
Update: 2020-01-25 15:00 GMT
ಮಂಗಳೂರು: ಮಂಗಳೂರಿನ ಕಿತ್ತಳೆ ವ್ಯಾಪಾರಿ 'ಅಕ್ಷರ ಸಂತ' ಹರೇಕಳ ಹಾಜಬ್ಬ 2020ನೆ ಸಾಲಿನ 'ಪದ್ಮಶ್ರೀ' ಗೌರವಕ್ಕೆ ಆಯ್ಕೆಯಾಗಿದ್ದು, ಪ್ರಶಸ್ತಿ ಶಾಲೆಗೆ ಸಂದ ಗೌರವ ಎಂದು ಅವರು ತಿಳಿಸಿದ್ದಾರೆ.
ದೆಹಲಿಯಿಂದ ಹಿಂದಿಯಲ್ಲಿ ಕರೆ ಬಂತು. ಪ್ರಶಸ್ತಿ ಬಗ್ಗೆ ಅಭಿನಂದಿಸಿದರು. ಕರೆ ಮಾಡಿದವರು ಹಿಂದಿಯಲ್ಲಿ ಮಾತನಾಡಿದ್ದರಿಂದ ನನಗೆ ಅಷ್ಟೇನೂ ತಿಳಿಯಲಿಲ್ಲ. ಸಂಜೆ ಬಳಿಕ ಕೆಲವರು ಫೋನ್ ಮಾಡಿ, ಪ್ರಶಸ್ತಿ ಬಂದಿರುವುದಾಗಿ ಅಭಿನಂದಿಸಿದರು. ನಿಜಕ್ಕೂ ಖುಷಿಯಾಯಿತು. ಆದರೆ ಪ್ರಶಸ್ತಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಕೆಲವು ವರ್ಷಗಳ ಹಿಂದೆ ದ.ಕ. ಜಿಲ್ಲಾಧಿಕಾರಿಯಾಗಿದ್ದ ಇಬ್ರಾಹೀಂ ಅವರು ನನ್ನನ್ನು ಪ್ರಶಸ್ತಿಗೆ ಶಿಫಾರಸು ಮಾಡಿದ್ದ ಬಗ್ಗೆ ಮಾಹಿತಿ ಇತ್ತು. ಒಟ್ಟಾರೆಯಾಗಿ ನನಗೆ ಬಂದಿರುವ ಪ್ರಶಸ್ತಿಯು ಶಾಲೆಗೆ ಸಂದ ಗೌರವವಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಸಂತಸ ವ್ಯಕ್ತಪಡಿಸಿದ್ದಾರೆ.