ಮೂಢನಂಬಿಕೆಗಳಿಗೆ ನಿಷೇಧ; ಬಿಜೆಪಿ ಯುಟರ್ನ್: ಕಾಂಗ್ರೆಸ್

Update: 2020-01-27 16:37 GMT

ಉಡುಪಿ, ಜ.27: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಅವಧಿಯಲ್ಲಿ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಾಗ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಧರ್ಮ ವಿರೋಧಿ, ಹಿಂದೂ ವಿರೋಧಿ ಎಂದು ದೂಷಿಸುತ್ತಾ ಅಪಪ್ರಚಾರ ನಡೆಸಿ ಮಸೂದೆ ಜಾರಿಯನ್ನು ತಡೆಯಲು ಪ್ರಯತ್ನ ನಡೆಸಿತ್ತು. ಇಂದು ಅದೇ ಕಾಯ್ದೆಯನ್ನು ಏನೊಂದು ಬದಲಾವಣೆ ಇಲ್ಲದೇ ಜಾರಿಗೊಳಿಸುವ ಮೂಲಕ ದ್ವಂದ್ವ ನಿಲುವನ್ನು ಜಗಜ್ಜಾಹೀರು ಪಡಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಟೀಕಿಸಿದೆ.

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದುಷ್ಟ ಪದ್ದತಿಗಳು, ಮಾಟ ಮಂತ್ರ ಮತ್ತು ವಾಮಾಚಾರ ನಿಯಂತ್ರಿಸುವ ಮಸೂದೆ- 2017ನ್ನು ಜಾರಿಗೊಳಿಸಲು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆದರೆ ಅಂದು ಈ ಕಾಯ್ದೆಯನ್ನು ಹಿಂದೂ ಧರ್ಮವನ್ನು ಮಾತ್ರ ಗುರಿಯಾಗಿಟ್ಟುಕೊಂಡು ಹಿಂದೂ ಧರ್ಮೀ ಯರ ಆಚರಣೆಯನ್ನು ನಿಷೇಧಿಸಲಾಗುತ್ತಿದೆ ಎಂದು ಹುಯಿಲೆಬ್ಬಿಸಿ ವಿರೋಧಿಸಿದ್ದ ಬಿಜೆಪಿ ಇಂದು, ಈ ಕಾಯ್ದೆಯನ್ನು ಯಾವುದೇ ಬದಲಾವಣೆ ಇಲ್ಲದೆ ಜಾರಿಗೆ ತಂದಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಬಿಜೆಪಿ ಯಾವಾಗಲೂ ತನ್ನ ಇಬ್ಬಂಗಿತನವನ್ನು ಪ್ರದರ್ಶಿಸುವುದು ಇದರಿಂದ ಋಜುವಾತಾಗಿದೆ. ಒಂದು ಕಡೆ ಮುಸ್ಲಿಮರನ್ನು ದ್ವೇಷಿಸುವಂತೆ ನಟಿಸುವುದು, ಇನ್ನೊಂದು ಕಡೆ ಅವರಿಗೆ ಹೆಚ್ಚಿನ ಅನುದಾನವನ್ನು ನೀಡಿ ಸಂತೃಪ್ತಿ ಗೊಳಿಸುವುದು ಬಿಜೆಪಿಯ ಆಡಳಿತ ವೈಖರಿ. ಕಾಂಗ್ರೆಸ್ ಸರಕಾರದ ಅವಧಿ ಯಲ್ಲಿ ಕಾರ್ಯಗತಗೊಳಿಸಲು ಯೋಜಿಸಿದ್ದ ಎಲ್ಲಾ ಜನಪರ ಯೋಜನೆಗಳನ್ನು ಉದಾ:ಆಧಾರ್, ಜಿಎಸ್‌ಟಿಗಳನ್ನು ಅಂದು ವಿರೋಧಿಸಿ ಈಗ ಕಾರ್ಯಗತ ಗೊಳಿಸುವ ಮೂಲಕ ತನ್ನ ಸಾಧನೆಯೆಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ವ್ಯಂಗ್ಯವಾಡಿದೆ.

ಸ್ವಂತಿಕೆಯೇ ಇಲ್ಲದ ಬಿಜೆಪಿ ಸದಾ ಧರ್ಮ ಹಾಗೂ ಅತೀ ಸೂಕ್ಷ್ಮ ವಿಷಯಗಳನ್ನು ಮುನ್ನಲೆಗೆ ತಂದು ತನ್ನ ವೈಫಲ್ಯವನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದೆ ಎಂದು ವಿವಾದಾತ್ಮಕ ಮೂಢ ನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ ರಾಜ್ಯ ಸರಕಾರದ ನಿಲುವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News