ಮಂಗಳೂರು ಸ್ಮಾರ್ಟ್ ಸಿಟಿಯಡಿ 2564.3 ಕೋಟಿ ರೂ.: 47 ಕಾಮಗಾರಿಗಳಲ್ಲಿ 2 ಕಾಮಗಾರಿ ಪೂರ್ಣ: ಮುಹಮ್ಮದ್ ನಝೀರ್

Update: 2020-01-28 12:10 GMT

ಮಂಗಳೂರು, ಜ.28: ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಡಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 2564.3 ಕೋಟಿ ರೂ. ಮೊತ್ತದ 47 ಕಾಮಗಾರಿಗಳು ಮಂಜೂರಾಗಿದ್ದು, ಈಗಾಗಲೇ 2 ಕಾಮಗಾರಿಗಳು ಸಂಪೂರ್ಣವಾಗಿವೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‌ಕ್ಲಬ್ ಆಶ್ರಯದಲ್ಲಿ ಇಂದು ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು.

2016ರ ಸೆಪ್ಟಂಬರ್‌ನಲ್ಲಿ 2ನೆ ಹಂತದಲ್ಲಿ ದೇಶದ 40 ನಗರಗಳಲ್ಲಿ ಮಂಗಳೂರು ಕೂಡಾ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿತ್ತು. ಬಳಿಕ ಆರು ತಿಂಗಳ ಪೂರ್ವ ತಯಾರಿಗಳು ನಡೆದು ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಮೂಲಕ ಯೋಜನೆಗೆ ರೂಪುರೇಷೆಗಳನ್ನು ತಯಾರಿಸಲಾಯಿತು. 2017ರ ಮೇ ತಿಂಗಳಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಆಗಿ ಒಪ್ಪಂದದೊಂದಿಗೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಪ್ರಥಮ ಕಾಮಗಾರಿಯಾಗಿ ನಗರದ 27 ಸರಕಾರಿ ಕಟ್ಟಡಗಳಲ್ಲಿ ಲೈಟಿಂಗ್ ವ್ಯವಸ್ಥೆಯನ್ನು ಎಲ್‌ಇಡಿಗೆ 1.91 ಕೋಟಿ ರೂ. ವೆಚ್ಚದಲ್ಲಿ ಪರಿವರ್ತಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಆಗಿದ್ದು, ಈ ಪರಿವರ್ತನೆಯಿಂದಾಗಿ ಶೇ. 52.5 ವಿದ್ಯುತ್ ಉಳಿತಾಯವಾಗುತ್ತಿದೆ. ಒಂದೂವರೆ ವರ್ಷದಲ್ಲೇ ಶೇ. 90ರಷ್ಟು ಹೂಡಿಕೆ ವಾಪಾಸಾಗಲಿದ್ದು, ವಾರ್ಷಕ 1.41 ಕೋಟಿ ರೂ. ಉಳಿತಾಯವಾಗಲಿದೆ ಎಂದವರು ವಿವರ ನೀಡಿದರು.

ಇದೇ ವೇಳೆ ನಗರದಲ್ಲಿ ನಿರ್ಮಿಸಲಾದ ಕ್ಲಾಕ್ ಟವರ್ ಬಗ್ಗೆಯೂ ಸಾಕಷ್ಟು ಪರ ವಿರೋಧ ಆಕ್ಷೇಪಗಳು ವ್ಯಕ್ತವಾಗಿದ್ದವು. ಆದರೆ ರಾಜ್ಯದಲ್ಲಿಯೇ ಪ್ರಥಮವಾದ ಅಪರೂಪದ ವಿನ್ಯಾಸ ಹಾಗೂ ವಾಸ್ತುಶಿಲ್ಪವನ್ನು ಹೊಂದಿದ ಸ್ಮಾರಕವಾಗಿ ಇದು ನಿರ್ಮಾಣವಾಗಿದೆ. ಆರಂಭದಲ್ಲಿ 90 ಲಕ್ಷ ರೂ. ವೆಚ್ಚದ ಕಾಮಗಾರಿ ಎಂದು ಅಂದಾಜಿಸಲಾಗಿದ್ದರೂ 45 ಲಕ್ಷ ರೂ.ಗಳಲ್ಲಿ ಇದನ್ನು ಪೂರ್ಣಗೊಳಿಸಲಾಗಿದೆ. ಇದೊಂದು ಪ್ರವಾಸಿಗರ ಆಕರ್ಷಣೆಯಾಗಲಿದೆ ಎಂದು ಅವರು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಇಂಟೆಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಗಳ ನಿರ್ಮಾಣ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ನಗರದಲ್ಲಿ ಸಂಚಾರ ವ್ಯವಸ್ಥೆಯ ನಿಗಾ, ಮೇಲ್ವಿಚಾರಣೆ ಜತೆಗೆ ಘನತ್ಯಾಜ್ಯ ವಾಹನಗಳ ನಿರ್ವಹಣೆ ಹಾಗೂ ಮೇಲುಸ್ತುವಾರಿಯನ್ನೂ ನಿರ್ವಹಿಸಲಿದೆ. ನಗರದಲ್ಲಿ ಘನತ್ಯಾಜ್ಯಗಳನ್ನು ನಿರ್ವಹಿಸುವ 132 ವಾಹನಗಳಿಗೆ ಜಿಪಿಎಸ್ ಅಳವಡಿಸಿ ವಾಹನಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಈಗಾಗಲೇ ಮಣ್ಣಗುಡ್ಡ ವಾರ್ಡ್‌ನಲ್ಲಿ 2000 ಮನೆಗಳಿಗೆ ಬಾರ್‌ಕೋಡ್ ಅಳವಡಿಸಿ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯನ್ನು ಈ ಕಮಾಂಡ್ ಕೇಂದ್ರದ ವ್ಯವಸ್ಥೆಗೆ ಒಳಪಡಿಸಲಾಗಿದೆ. ಈ ಯೋಜನೆಯಡಿ ನಗರದ 15 ಪ್ರಮುಖ ಜಂಕ್ಷನ್‌ಗಳಲ್ಲಿ ಸ್ಮಾರ್ಟ್ ಪೋಲ್‌ಗಳ ಅಳವಡಿಕೆ ನಡೆಯಲಿದೆ. ಎಲ್‌ಇಡಿ ಲೈಟ್, ಅಗತ್ಯ ಮಾಹಿತಿಗಳನ್ನು ಒದಗಿಸುವ ವಿಎಂಎಸ್ ಬೋರ್ಡ್, 360 ಡಿಗ್ರಿ ಸುತ್ತಬಲ್ಲ ಕ್ಯಾಮರಾ ಸೇರಿ ಐದು ಕ್ಯಾಮರಾಗಳ ಮೂಲಕ ನಗರದ ಗಸ್ತು ಕಾರ್ಯವೂ ಈ ಸ್ಮಾರ್ಟ್ ಪೋಲ್ ಮೂಲಕ ನಡೆಯಲಿದೆ. ಇದು ಪೊಲೀಸ್ ಕಂಟ್ರೋಲ್ ರೂಂಗೂ ಸಂಪರ್ಕವನ್ನು ಹೊಂದಿರುತ್ತದೆ. ಇದರಲ್ಲಿ ಎಮರ್ಜೆನ್ಸಿ ಬಟನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಈ ಬಟನ್ ಪ್ರೆಸ್ ಮಾಡುವ ಮೂಲಕ ಸಂಬಂಧಪಟ್ಟವರಿಗೆ ಸಂದೇಶವನ್ನು ರವಾನಿಸಬಹುದಾಗಿದೆ ಎಂದು ಮುಹಮ್ಮದ್ ನಝೀರ್ ವಿವರ ನೀಡಿದರು.

6 ತಿಂಗಳಲ್ಲಿ ಬೀದಿ ದೀಪಗಳು ಸ್ಮಾರ್ಟ್ 

ಬೀದಿ ಬೀದಿಗಳನ್ನು ಎಲ್‌ಇಡಿಗೆ ಪರಿರ್ವತಿಸುವ ನಿಟ್ಟಿನಲ್ಲಿ ಟೆಂಡರ್ ಆಗಿದ್ದು, ಆರು ತಿಂಗಳಲ್ಲಿ ನಗರದ ಎಲ್ಲಾ ಬೀದಿ ದೀಪಗಳು ಸ್ಮಾರ್ಟ್ ಆಗಲಿವೆ. ಜತೆಗೆ ವಾತಾವರಣಕ್ಕೆ ಹೊಂದಿಕೊಂಡು ಇದು ಬೆಳಗುವ ವ್ಯವಸ್ಥೆಯೂ ಆಗಲಿದೆ ಎಂದು ಅವರು ಹೇಳಿದರು.
ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಮಹಾನಗರ ಪಾಲಿಕೆಯ 1.55 ಎಕರೆ ಜಮೀನಿನಲ್ಲಿ 94 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದ್ದು, ಫೆಬ್ರವರಿ ಪ್ರಥಮ ವಾರದ ಮಂಡಳಿ ಸಭೆಯಲ್ಲಿ ನಿರ್ಣಯವಾಗಲಿದೆ ಎಂದು ಮುಹಮ್ಮದ್ ನಝೀರ್‌ರವರು ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಯೋಜನೆಗಳ ವಿವರ ನೀಡಿದರು.

ಕಾರ್ಯಕ್ರಮದಲ್ಲಿ ಸ್ಮಾರ್ಟ್ ಸಿಟಿಯ ಜನರಲ್ ಮ್ಯಾನೇಜರ್ (ತಾಂತ್ರಿಕ) ಅರುಣ್ ಪ್ರಭಾ, ಜಿಎಂ ಮಹೇಶ್ ಕುಮಾರ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ, ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ ರೆ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News