ಯೆನೆಪೋಯದಲ್ಲಿ ಹರೇಕಳ ಹಾಜಬ್ಬ, ಡಾ.ಹಬೀಬ್ ರಹ್ಮಾನ್ ರಿಗೆ ಅಭಿನಂದನೆ ಕಾರ್ಯಕ್ರಮ

Update: 2020-01-28 12:14 GMT

ಕೊಣಾಜೆ: ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕತೆಯೊಂದಿಗೆ ನಿಸ್ವಾರ್ಥವಾಗಿ ಸಮಾಜಕ್ಕೆ‌ ಕೊಡುಗೆ ನೀಡಿದರೆ ಒಂದಲ್ಲ ಒಂದು ದಿನ ಅವರನ್ನು ಇಡೀ ಸಮಾಜವೇ  ಗುರುತಿಸುತ್ತದೆ. ಇದಕ್ಕೆ ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ಹಬೀಬ್ ರಹ್ಮಾನ್ ಅವರೇ ಸಾಕ್ಷಿ ಯಾಗಿದ್ದಾರೆ. ಇವರಿಬ್ಬರೂ ಸಲ್ಲಿಸಿದ ಸೇವೆ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ಯೆನಪೋಯ ವಿವಿಯ ವೈ. ಅಬ್ದುಲ್ಲಾ ಕುಂಞಿ ಅವರು ಹೇಳಿದರು.

ಅವರು ಮಂಗಳೂರು ಯೆನಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ‌ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ  ಇನ್ ಸ್ಪೈರೇಶನಲ್ ಲೀಡರ್ ಶಿಪ್  ಪ್ರಶಸ್ತಿ  ಪುರಸ್ಕೃತ ಡಾ.ಸಿ.ಪಿ. ಹಬೀಬ್ ರಹ್ಮಾನ್ ಅವರ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಿತ್ತಲೆ ಮಾರುವುದರೊಂದಿಗೆ ತಮ್ಮ ಗ್ರಾಮದ ಮಕ್ಕಳು ಅಕ್ಷರವಂತರಾಗಬೇಕು ಎನ್ನುವ ಕನಸಿನೊಂದಿಗೆ ಶಾಲೆಯನ್ನು ಆರಂಭಿಸಿ ಸಮಾಜಕ್ಕೆ‌ ಉತ್ತಮ ಕೊಡುಗೆ ನೀಡಿದ್ದು. ಇವರ ಸಮಾಜ ಸೇವೆಯನ್ನು ಸರ್ಕಾರ ಗುರುತಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ ಅವರು, ಈ ಬಡ ವ್ಯಕ್ತಿಯನ್ನು ಯೆನಪೋಯ ಸಂಸ್ಥೆ ಸನ್ಮಾನಿಸಿ‌ ಗೌರವಿಸಿರುವುದಕ್ಕೆ  ನಾನು ಚಿರರುಣಿಯಾಗಿದ್ದಾನೆ.  2009ರಲ್ಲೇ ಹರೇಕಳದ ಶಾಲೆಗೆ ಕಂಪ್ಯೂಟರ್ ಜೊತೆಗೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ‌ಶಿಕ್ಷಣ ಒದಗಿಸಿದ ಮಹಾ ಕೊಡುಗೆಯನ್ನು ಯೆ‌ನಪೋಯ ಸಂಸ್ಥೆ ನೀಡಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದೆ.  ಅಲ್ಲದೆ ಇಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಎಲ್ಲರೂ ಸಮಾಜಕ್ಕೆ ಬಡವರಿಗೆ ಕೊಡುಗೆ ನೀಡುವಂತಾಗಲಿ ಹಾಗೂ‌ ಸಂಸ್ಥೆಗೆ ಇನ್ನಷ್ಟು ಕೀರ್ತಿ ಬರಲಿ ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ಇಸ್ಲಾಮಿಕ್ ಅಕಾಡೆಮಿಕ್ ಎಜ್ಯುಕೇಶನ್ ನ ಟ್ರಸ್ಟಿ ಡಾ.ಸಿ.ಪಿ‌.ಹಬೀಬ್ ರಹ್ಮಾನ್ ಮಾತನಾಡಿ, ಭಾರತ ಸರಕಾರವು ಹರೇಕಳ ಹಾಜಬ್ಬ ರಂತಹ ಸಾಮಾನ್ಯ ವ್ಯಕ್ತಿಗೆ ಗುರುತಿಸಿರುವುದು ಹೆಮ್ಮೆಯ ವಿಚಾರವಾಗಿದೆ.  ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಅರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವು ಕೊಡುಗೆ ನೀಡುವಂತಾಗಬೇಕು. ಯೆನಪೋಯ ಸಂಸ್ಥೆಯು ವೈದ್ಯಕೀಯ ಸೇವೆಯೊಂದಿಗೆ ಹಲವಾರು ಸಮಾಜಮುಖಿ ಯೋಜನೆಯ ಮೂಲಕ ಗುರುತಿಸಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಯೆನಪೋಯ ವಿವಿ ಕುಲಪತಿ ಡಾ.ಎಂ.ವಿಜಯಕುಮಾರ್,  ಯೆನಪೋಯ ಗ್ರೂಪ್ ಚೆಯರ್ ಮೆನ್  ವೈ. ಮಹಮ್ಮದ್ ಕುಂಞಿ, ಹಣಕಾಸು ಅಧಿಕಾರಿ ಮಹಮ್ಮದ್ ಬಾವು ಮೊದಲಾದವರು ಉಪಸ್ಥಿತರಿದ್ದರು. ಕುಲಸಚಿವ ಗಂಗಾಧರ ಸೋಮಯಾಜಿ ಸ್ವಾಗತಿಸಿದರು. ಡಾ.ನಂದೀಶ್ ವಂದಿಸಿದರು. ಡಾ.ರೋಶನಿ, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News