×
Ad

ಕಲಬುರಗಿ: 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆ.ಎಂ ಸಿದ್ದೀಕ್ ಮೊಂಟುಗೋಳಿಗೆ ಸನ್ಮಾನ

Update: 2020-01-31 16:50 IST

ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕಲಬುರುಗಿಯಲ್ಲಿ ಫೆ.5,6 ಹಾಗೂ 7ರಂದು ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮವು ಫೆ.6ರಂದು ಮದ್ಯಾಹ್ನ 2.30ಕ್ಕೆ ನಡೆಯಲಿದ್ದು, ಈ ಸಂದರ್ಭ ಕೆ.ಎಂ. ಅಬೂಬಕರ್ ಸಿದ್ದೀಕ್ ಮೊಂಟುಗೋಳಿ ಅವರನ್ನು ಸನ್ಮಾನಿಸಲಾಗುವುದು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸನ್ಮಾನ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೈಗಾರಿಕಾ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಿದ್ದೀಕ್ ಮೊಂಟುಗೋಳಿ ಅವರನ್ನು ಸನ್ಮಾನಿಸಲಿದ್ದಾರೆ.

ಸಿದ್ದೀಕ್ ಮೊಂಟುಗೋಳಿ ಪರಿಚಯ

1979 ಮೇ 21 ರಂದು ಮಂಗಳೂರಿನ ಹರೇಕಳದಲ್ಲಿ ಅಲ್ಹಾಜ್ ಕೆ.ಪಿ.ಕುಂಞಿ ಅಹ್ಮದ್ ಮುಸ್ಲಿಯಾರ್ ಬಾಖವಿ ಮತ್ತು ಅವ್ವಾ ಹಾಜಿಮಾ ಬೈತಾರ್ ಅವರ ಪುತ್ರನಾಗಿ ಜನಿಸಿದ ಕೆ.ಎಂ. ಅಬೂಬಕರ್ ಸಿದ್ದೀಕ್ ಮೊಂಟುಗೋಳಿ ಅವರ ಕುಟುಂಬ ಪ್ರಸಕ್ತ ಕಿನ್ಯಾ ಗ್ರಾಮದ ಮೊಂಟುಗೋಳಿಯಲ್ಲಿ ವಾಸ್ತವ್ಯ ಹೂಡಿದೆ.

ಪತ್ರಿಕೋದ್ಯಮ ಮತ್ತು ಕನ್ನಡ ಸಾಹಿತ್ಯದಲ್ಲಿ ಪದವಿ, ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಯಾಗಿರುವ ಇವರ ಹತ್ತಕ್ಕೂ ಅಧಿಕ ಪುಸ್ತಕಗಳು ಪ್ರಕಟವಾಗಿವೆ. ಹತ್ತಾರು ಸ್ಮರಣ ಸಂಚಿಕೆಗಳ ಸಂಪಾದನೆ ಮಾಡಿರುವ ಇವರ ಸಾವಿರಾರು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಸುನ್ನಿ ಸಾಹಿತ್ಯ ಪುರಸ್ಕಾರ, ದಾರುರ್ ಇರ್ಶಾದ್ ಬೆಳ್ಳಿಹಬ್ಬ ಪುರಸ್ಕಾರ, ನೂರುಲು ಉಲಮಾ ಸಾಹಿತ್ಯ ಪ್ರಶಸ್ತಿಗಳಿಂದ ಪುರಸ್ಕೃತರಾದ ಇವರು ವೃತ್ತಿಪರವಾಗಿ ಪತ್ರಕರ್ತ ಮತ್ತು ಧರ್ಮ ಗುರುಗಳಾಗಿದ್ದಾರೆ. ಸುನ್ನೀ ಸ್ಟುಡೆಂಟ್ ಫೆಡರೇಶನ್ ಇದರ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ, ಕರ್ನಾ‍ಟಕ ಸುನ್ನಿ ಕೋ ಆರ್ಡಿನೇಶನ್ ಸಮಿತಿಯ ಕಾರ್ಯದರ್ಶಿ, ಹೀಗೆ ಅನೇಕ ಸಂಘಟನೆಗಳಲ್ಲಿ ದುಡಿಯುತ್ತಿರುವ ಇವರು ಕರ್ನಾಟಕ ರಾಜ್ಯ ಹಜ್ ಸಮಿತಿಯ ನಿಕಟ ಪೂರ್ವ ಸದಸ್ಯರಾಗಿದ್ದಾರೆ.

ಅಲ್ ಅನ್ಸಾರ್, ಮೊಯ್ಲಾಂಜಿ ಮತ್ತು ಇಶಾರ ಪತ್ರಿಕೆಗಳಲ್ಲೂ ಸೇವೆ ಸಲ್ಲಿಸಿರುವ ಅಬೂಬಕರ್ ಸಿದ್ದೀಕ್ ಮೊಂಟುಗೋಳಿ ಉತ್ತಮ ವಾಗ್ಮಿಯಾಗಿದ್ದು, ಧರ್ಮ ಭೋಧನೆ, ಕೋಮು ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯ ಇತ್ಯಾದಿಗಳ ಬಗ್ಗೆ ಉಪನ್ಯಾಸ ನೀಡಿದ್ದು, ಅರಬ್ ರಾಷ್ಟ್ರಗಳಿಗೂ ಭೇಟಿ ನೀಡಿದ್ದಾರೆ.

Writer - ಮುಹಮ್ಮದ್ ಅಲಿ ಕಮ್ಮರಡಿ

contributor

Editor - ಮುಹಮ್ಮದ್ ಅಲಿ ಕಮ್ಮರಡಿ

contributor

Similar News