ಗುಜರಾತ್ ಹತ್ಯಾಕಾಂಡ: ಎಪ್ರಿಲ್ 14ರಂದು ಝಕಿಯಾ ಜಾಫ್ರಿ ಮನವಿ ಆಲಿಕೆ

Update: 2020-02-04 17:15 GMT

ಹೊಸದಿಲ್ಲಿ, ಫೆ. 4: ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಗೆ ಸಿಟ್ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಹತ್ಯೆಯಾದ ಸಂಸದ ಏಹ್ಸಾನ್ ಜಾಫ್ರಿ ಪತ್ನಿ ಝಕಿಯಾ ಜಾಫ್ರಿ ಸಲ್ಲಿಸಿದ ಮನವಿಯಯನ್ನು ಸುಪ್ರೀಂ ಕೋರ್ಟ್ ಎಪ್ರಿಲ್ 14ರಂದು ವಿಚಾರಣೆ ನಡೆಸಲಿದೆ.

 ಪ್ರಕರಣದ ವಿಚಾರಣೆ ಮುಂದೂಡುವಂತೆ ಝಕಿಯಾ ಜಾಫ್ರಿ ವಕೀಲ ನ್ಯಾಯಾಲಯದಲ್ಲಿ ಮನವಿ ಮಾಡಿದ ಬಳಿಕ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನು ಒಳಗೊಂಡ ಪೀಠ ವಿಚಾರಣೆಯನ್ನು ಎಪ್ರಿಲ್ 14ಕ್ಕೆ ಮುಂದೂಡಿತು.

  ಝಕಿಯಾ ಜಾಫ್ರಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ನ್ಯಾಯವಾದಿ ಅಪರ್ಣಾ ಭಟ್, ಈ ಪ್ರಕರಣದ ವಿಷಯ ವಿವಾದಾಸ್ಪದವಾಗಿದೆ ಎಂದರು. ಅದಕ್ಕೆ ನ್ಯಾಯಾಲಯ, ಈ ಪ್ರಕರಣದ ವಿಚಾರಣೆಯನ್ನು ಹಲವು ಬಾರಿ ಮುಂದೂಡಲಾಗಿದೆ. ಏನೇ ಆಗಲಿ ನಾವು ಈ ಪ್ರಕರಣವನ್ನು ಕೆಲವು ದಿನಗಳಲ್ಲಿ ವಿಚಾರಣೆ ನಡೆಸಲಿದ್ದೇವೆ. ಒಂದು ದಿನಾಂಕ ತೆಗೆದುಕೊಳ್ಳಿ ಹಾಗೂ ನೀವೆಲ್ಲ ಹಾಜರಾಗುತ್ತೀರಾ ಎಂದು ಖಾತರಿಪಡಿಸಿಕೊಳ್ಳಿ ಎಂದು ಹೇಳಿತು.

  2002 ಫೆಬ್ರವರಿ 27ರಿಂದ 2002 ಮೇ ವರೆಗೆ ‘ಭಾರೀ ಪಿತೂರಿ’ಗೆ ಈ ಮನವಿ ಸಂಬಂಧಿಸಿರುವುದರಿಂದ ನೋಟಿಸು ನೀಡುವ ಅಗತ್ಯ ಇದೆ ಎಂದು ಜಾಫ್ರಿ ವಕೀಲರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News