ಎನ್.ಆರ್.ಸಿ, ಸಿಎಎ ವಿರುದ್ಧ ದೇಶದ ಶೇ. 50ಕ್ಕೂ ಹೆಚ್ಚು ಜನ ಬೀದಿಗೆ ಬಂದಿದ್ದಾರೆ: ಪ್ರತಿಭಾ ಉಭಾಲೆ

Update: 2020-02-06 17:41 GMT

ಭಟ್ಕಳ:  ಎನ್.ಆರ್.ಸಿ, ಎನ್.ಪಿ.ಆರ್ ಹಾಗೂ ಸಿಎಎ ಎಂಬ ಕರಾಳ ಕಾನೂನಿನ ವಿರುದ್ಧ ದೇಶದ ಶೇ.50%ಕ್ಕೂ ಹೆಚ್ಚು ಜನರು ಬೀದಿಗೆ ಬಂದು ಪ್ರತಿಭಟನೆ, ಹೋರಾಟ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಹೋರಾಟಗಳು ಇನ್ನಷ್ಟು ಪ್ರಭಲವಾಗಲಿವೆ ಎಂದು ಮಹಾರಾಷ್ಟ್ರದ ಬಹುಜನ ಕ್ರಾಂತಿ ಮೋರ್ಚಾ ಮಹಿಳಾ ಸಂಯೋಜಕಿ ಪ್ರತಿಭಾ ಉಭಾಲೆ ಹೇಳಿದರು.

ಅವರು ಗುರುವಾರ ಇಲ್ಲಿನ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಾಲಾ ಮೈದಾನದಲ್ಲಿ ನಡೆದ ವಿ ದಿ ಪೀಪಲ್ ಆಫ್ ಇಂಡಿಯಾ ದ ಭಾರತದ ಸಂವಿಧಾನ ರಕ್ಷಣೆ ಮಹಿಳಾ ಜನಾಂದೋಲನ ಸಮಾವೇಶದಲ್ಲಿ ಕಕ್ಕಿರಿದು ಸೇರಿದ ಮಹೀಳೆಯರನ್ನುದ್ದೇಶಿಸಿ ಮಾತನಾಡಿದರು.

ಸಿಎಎ ಯನ್ನು ಸಮರ್ಥನೆ ಮಾಡಿಕೊಳ್ಳಲು ಕೇಂದ್ರಕ್ಕೆ ನಾಲ್ಕು ವಾರಗಳ ಕಾಲಾವಕಾಶ ಸಿಕ್ಕಿದ್ದು ದೇಶದ ಸೌಹಾರ್ದತೆಯನ್ನು ಕೆಡಿಸುವುದರ ಮೂಲಕ ಅರಾಜಕತೆಯನ್ನು ಸೃಷ್ಟಿಸಲು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಸೈತಾನನ ಸಂತತಿಗಳಿಂದಾಗಿ ಈ ದೇಶದ ಅಲ್ಪಸಂಖ್ಯಾತರು, ಎಸ್ಸಿ,ಎಸ್ಟಿ,ಒಬಿಸಿ, ಆದಿವಾಸಿ ಸಮುದಾಯ, ಅನುಸೂಚಿತ ಪಂಗಡದವರು ಒಂದಾಗಲು ಅವಕಾಶ ಸಿಕ್ಕಂತಾಗಿದೆ ಎಂದ ಅವರು ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಯನ್ನು ಅರ್ಪಿಸಿದರು.

ದೇಶದಲ್ಲಿ ವಿರೋಧ ಪಕ್ಷ ಸತ್ತು ಹೋಗಿದ್ದು ವಿರೋಧ ಪಕ್ಷ ಮಾಡುವಂತಹ ಕಾರ್ಯವನ್ನು ಮಹಿಳೆಯರು ಮಾಡುತ್ತಿದ್ದಾರೆ. ಮಹಿಳೆಯರ ಹೋರಾಟಗಳಿಗೆ ಹೆದರಿಕೊಂಡ ಅಮಿತ್ ಶಾ ಸಂಸತ್ತಿನಲ್ಲಿ ಎನ್.ಆರ್.ಸಿ ಸಧ್ಯಕ್ಕೆ ಇಲ್ಲ ಎನ್ನುವ ಮಾತನ್ನು ಆಡಿದ್ದಾರೆ ನಮ್ಮ ಹೋರಾಟಗಳು ಇಷ್ಟಕ್ಕೆ ನಿಲ್ಲುವುದಿಲ್ಲ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಹೋರಾಟಗಳು ಇನ್ನಷ್ಟು ಪ್ರಭಲವಾಗಲಿವೆ ಎಂದರು.

ಭಾರತ ದೇಶವನ್ನು ಹಿಂದೂಸ್ಥಾನ ಎಂದು ಕರೆಯುವುದು ಸರಿಯಲ್ಲ. ಇದು ಹಿಂದೂಸ್ಥಾನವಲ್ಲ ಇದು ಭಾರತ ಅಥವಾ ಇಂಡಿಯಾ ಆಗಿದೆ. ನೀವು ಹಿಂದೂಸ್ಥಾನ ಎಂದು ಕರೆಯುವುದರ ಮೂಲಕ ಆರ್.ಎಸ್.ಎಸ್ ನ ಅಜೆಂಡಾಗಳಿಗೆ ನೀರೆರೆಯುತ್ತಿದ್ದೀರಿ ಇಂದಿನಿಂದ ಯಾರೂ ಕೂಡ ಹಿಂದೂಸ್ಥಾನ ಎನ್ನದೆ ಭಾರತವೆನ್ನಬೇಕು ಎಂದು ಕರೆ ನೀಡಿದರು.

ಮುಸ್ಲಿಮ್ ಪರ್ಸನಲ್ ಲಾ ಬೋರ್ಡ ಸದಸ್ಯ ಆಸೀಫಾ ನಿಸಾರ್ ಬೆಂಗಳೂರು ಮಾತನಾಡಿ ಜಗತ್ತಿನಲ್ಲೆಡೆ ಇಸ್ಲಾಮೋಫೋಬಿಯ ಸೃಷ್ಟಿಸಿ ಜನರನ್ನು ಹೆದರಿಸಲಾಗುತ್ತಿದೆ.  ಭಾರತೀಯರನ್ನು ಹಿಂದೂ-ಮುಸ್ಲಿ ಎಂದು ವಿಂಗಡಣೆ ಮಾಡುವುದರ ಮೂಲಕ ವಿಭಜಿಸಲಾಗುತ್ತಿದೆ ಎಂದ ಅವರು ಯಾರು ಸಿಎಎ ಮತ್ತು ಎನ್.ಆರ್.ಸಿ ಎನ್.ಪಿ.ಆರ್ ಗಳ ವಿರುದ್ಧ ಹೋರಾಡುತ್ತಾರೋ ಅವರೊಂದಿಗೆ ನಾವಿದ್ದೇವೆ ಎಂದರು. ಶಾಹೀನ್ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಹಾಗೂ ಮಹಿಳಾ ಪಾಲಕರೊಬ್ಬರ ವಿರುದ್ಧ ಸುಳ್ಳು ಮೊಕದ್ದೆ ದಾಖಲಿಸಿದ್ದ ನಾಚಿಕೆಗೇಡು ಎಂದ ಅವರು ಕಲ್ಲಡ್ಕ ಪ್ರಭಾಕರ್ ಭಟ್ಟರ ಶಾಲೆಯ ವಿರುದ್ಧವೇಕೆ ಪ್ರಕರಣ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದರು.

ಮಂಗಳೂರಿನ ಸುಮಯ್ಯ ಹಮಿದುಲ್ಲಾ ಮಾತನಾಡಿ, ನಾನು ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕೆಂಬ ಪಣವನ್ನು ಇಲ್ಲಿನ ಪ್ರತಿಯೊಬ್ಬ ಮಹೀಳೆ ಮಾಡಬೇಕು, ನಮಗೆ ಅನ್ನ, ಆಹಾರ, ಜೀವದ ಭಯವಿಲ್ಲ ಅದು ನಮಗೆ ನಮ್ಮ ಪ್ರಭು ದಯಪಾಲಿಸುತ್ತಾನೆ ಅನ್ಯಾಯದ ವಿರುದ್ಧ ಮಹಿಳೆ ತನ್ನ ಶಕ್ತಿ ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದರು.

ಸಾಜೀದ್ ಅಂಜುಮ್ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ರುಫೇದಾ ಅಝೀಝುರ್ರಹ್ಮಾನ್ ರುಕ್ನುದ್ದೀನ್ ಅತಿಥಿಗಳನ್ನು ಪರಿಚಯಿಸಿದರು. ಬರೀರ ಮೊಹತೆಶಮ್ ಕಾರ್ಯಕ್ರಮ ನಿರೂಪಿಸಿದರು. ನಬೀರಾ ಹಬೀಬ್ ಮೊಹತೆಶಮ್ ವಂದಿಸಿದರು. ಝೊಹರಾ ಬತೂಲ್, ಸಬಿಹಾ ಫಾರೂಖ್ ಕೌಡಾ, ಫರ್ಹತ್ ಕಾಝೀಯಾ, ನುಸ್ರತ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News