ಮಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕ ರಚಿಸಿಲ್ಲವೇ ? ಹಾಗಿದ್ದರೆ ಫೆ. 10ರಿಂದ ದಂಡ ತೆರಲು ಸಿದ್ಧರಾಗಿ
ಮಂಗಳೂರು, ಫೆ. 7: ನಗರದ ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆಯನ್ನು ಕಲ್ಪಿಸಲಾಗದಿದ್ದಲ್ಲಿ ಅಥವಾ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ರಚಿಸದಿದ್ದಲ್ಲಿ ಫೆ. 10ರಿಂದ ಅನ್ವಯವಾಗುವಂತೆ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸುವುದಾಗಿ ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.
ಮನಪಾ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದ ಎಲ್ಲಾ ಅಪಾರ್ಟ್ಮೆಂಟ್ಗಳಿಗೆ ಅಸೋಸಿಯೇಶನ್ ಮೂಲಕ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ 2019ರ ಅಕ್ಟೋಬರ್ ಅಂತ್ಯದೊಳಗೆ ಘನತ್ಯಾಜ್ಯ ಘಟಕವನ್ನು ರಚಿಸುವಂತೆ ಸೂಚನೆ ನೀಡಲಾಗಿತ್ತು ಎಂದರು.
ಪ್ರಥಮ ಹಂತವಾಗಿ 1948 ಅಪಾರ್ಟ್ಮೆಂಟ್ಗಳಿಗೆ ನೋಟೀಸು ಕೂಡಾ ನೀಡಲಾಗಿದೆ. ಡಿಸೆಂಬರ್ 3ರಂದು ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಸಭೆ ಕರೆದು ಡಿಸೆಂಬರ್ ಅಂತ್ಯದೊಳಗೆ ತ್ಯಾಜ್ಯ ಸಂಸ್ಕರಣಾ ಘಟಕ ರಚಿಸುವಂತೆ ಮರು ಸೂಚನೆ ನೀಡಲಾಗಿತ್ತು. ಕೆಲವು ಅಪಾರ್ಟ್ಮೆಂಟ್ ಅಸೋಸಿಯೇಶನ್ಗಳು ತ್ಯಾಜ್ಯ ಸಂಸ್ಕರಣೆ ಮಾಡುವ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ ಹೆಚ್ಚಿನ ಅಪಾರ್ಟ್ಮೆಂಟ್ ಅಸೋಸಿಯೇಶನ್ಗಳು ಹಸಿ ತ್ಯಾಜ್ಯ ಸಂಸ್ಕರಣೆಯ ಘಟಕ ಸ್ಥಾಪಿಸಲು ಆಸಕ್ತಿ ತೋರುವುದು ಕಂಡು ಬಂದಿಲ್ಲ. ಮಾತ್ರವಲ್ಲದೆ ಪಾಲಿಕೆ ವತಿಯಿಂದ ಕಟ್ಟಡ ಪರವಾನಿಗೆ ನೀಡುವ ಸಮಯದಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ನಿರ್ವಹಣೆ ಮಾಡಲು ಕಡ್ಡಾಯಗೊಳಿಸಿದ್ದರೂ ಬಿಲ್ಡರ್ ಹಾಗೂ ಅಪಾರ್ಟ್ಮೆಂಟ್ ಅಸೋಸಿಯೇಶನ್ಗಳು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಸೂಚನೆಯಂತೆ ಹಾಗೂ ಘನತ್ಯಾಜ್ಯ ನಿರ್ವಹಣೆ ಹಾಗೂ ವ್ಯವಸ್ಥಾಪನೆ ನಿಯಮಗಳ 2016ರಂತೆ ಭಾರೀ ತ್ಯಾಜ್ಯ ಉತ್ಪಾದಕರು ಸಂಸ್ಕರಣಾ ವ್ಯವಸ್ಥೆಯನ್ನು ಅನುಷ್ಠಾನಗೊಳಿಸದಿರುವವರ ವಿರುದ್ಧ ಫೆ. 10ರಿಂದ ಆರಂಭದಲ್ಲಿ 25,000 ರೂ. ದಂಡ ವಿಧಿಸಲಾಗುವುದು. ಎರಡನೆ ಬಾರಿಗೆ 50,000 ರೂ. ದಂಡ ಹಾಗೂ ಮೂರನೆ ಬಾರಿಗೆ ತ್ಯಾಜ್ಯ ಉತ್ಪಾದಕರ ವಿರುದ್ಧ ಪ್ರಕರಣ ದಾಖಲಿಸಲು ಮನಪಾ ನಿರ್ಧರಿಸಿದೆ ಎಂದವರು ಹೇಳಿದರು.
ಮನಪಾ ಜಂಟಿ ಆಯುಕ್ತರಾದ ಡಾ. ಸಂತೋಷ್ ಕುಮಾರ್, ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ, ಪರಿಸರ ಅಭಿಯಂತರ ಮಧು ಉಪಸ್ಥಿತರಿದ್ದರು.