ಉಡುಪಿ: ಕೊರೊನಾ ವೈರಸ್ ಶಂಕಿತರಿಗೆ ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ
ಉಡುಪಿ, ಫೆ.8: ಚೀನದಿಂದ 15-20 ದಿನಗಳ ಹಿಂದೆ ಉಡುಪಿ ಜಿಲ್ಲೆಯ ಹುಟ್ಟೂರಿಗೆ ಮರಳಿ ಬಂದ ನಾಲ್ವರು, ಶಂಕಿತ ಕೊರೊನಾ ವೈರಸ್ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ನಿನ್ನೆ ದಾಖಲಾಗಿ, ಪ್ರತ್ಯೇಕಿತ ವಾರ್ಡುಗಳಲ್ಲಿ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.
ಇವರಲ್ಲಿ ಯಾವುದೇ ವಿಧದ ರೋಗದ ಲಕ್ಷಣಗಳು ಕಾಣಿಸಿಕೊಳ್ಳದ ಮಹಿಳೆಯನ್ನು ಹಲವಾರು ಸೂಚನೆಗಳು, ನಿರ್ಬಂಧಗಳನ್ನು ವಿಧಿಸಿ ಇಂದು ಮನೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಉನ್ನತ ಮೂಲಗಳು ತಿಳಿಸಿವೆ.
ಸಾಮಾನ್ಯ ಶೀತ, ಗಂಟಲು ನೋವು, ಜ್ವರದಿಂದ ಬಾಧಿತರಾಗಿರುವ ನಾಲ್ಕು ವರ್ಷದ ಮಗುವೂ ಸೇರಿದಂತೆ ಇತರ ಮೂವರಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ಇವರೆಲ್ಲರೂ ಚೇತರಿಸಿಕೊಳ್ಳುತಿದ್ದಾರೆ ಎಂದು ಈ ಮೂಲ ತಿಳಿಸಿದೆ. ಮಹಿಳೆಯ ಗಂಡ ಮತ್ತು ಮಗು ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಕಾಪು ತಾಲೂಕಿನ ಯುವಕ ಇಂಜಿನಿಯರ್ ಆಗಿದ್ದು, 15 ದಿನಗಳ ಹಿಂದೆ ಚೀನದಿಂದ ಬಂದ ನಂತರ ಮನೆಯಿಂದ ಹೊರಗೆಲ್ಲೂ ಹೋಗಿರಲಿಲ್ಲ ಎಂದು ಹೇಳಲಾಗಿದೆ. ಕೊರೊನಾ ವೈರಸ್ ಕುರಿತಂತೆ ಮಾಹಿತಿಯನ್ನು ಹೊಂದಿರುವ ಇವರು ಯಾರನ್ನೂ ಸಹ ಭೇಟಿಯಾಗದೇ ಮನೆಯಲ್ಲೇ ಉಳಿದಿದ್ದರು. ಸ್ವಲ್ಪ ಶೀತ ಹಾಗೂ ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಚೇತರಿಸಿಕೊಂಡಿದ್ದು, ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತಿದ್ದಾರೆ.
ಬ್ರಹ್ಮಾವರ ತಾಲೂಕಿನವರಾದ ಮತ್ತೊಬ್ಬರು ಚೀನದಲ್ಲಿ ನೌಕರಿಯಲ್ಲಿದ್ದು, ಪತ್ನಿ ಹಾಗೂ ಮಗುವಿನೊಂದಿಗೆ ಎರಡು ವಾರಗಳ ಹಿಂದೆ ಹುಟ್ಟೂರಿಗೆ ಬಂದಿದ್ದರು. ಇವರಲ್ಲಿ ಪತಿಗೆ ಶೀತ ಹಾಗೂ ಕೆಮ್ಮು ಇದ್ದು, ಮಗುವಿಗೆ ಶೀತ ಹಾಗೂ ಲಘು ಜ್ವರವಿದೆ. ಆದರೆ ಪತ್ನಿ ಸಂಪೂರ್ಣ ಆರೋಗ್ಯವಂತರಾಗಿದ್ದಾರೆ. ಚಿಕಿತ್ಸೆಯ ಬಳಿಕ ಇಬ್ಬರೂ ಚೇತರಿಸಿಕೊಂಡಿದ್ದಾರೆ. ಯಾರೊಂದಿಗೂ ಬೆರೆಯದೇ, ಪ್ರತ್ಯೇಕವಾಗಿ ತೆರಳಿ, ಮನೆಯಲ್ಲಿ ಪ್ರತ್ಯೇಕವಾಗಿ ಇರಬೇಕೆಂಬ ಷರತ್ತು ಹಾಗೂ ಸದಾ ಕಾಲ ಬಾಯಿ-ಮೂಗಿಗೆ ಸುರಕ್ಷಾ ಕವಚ (ಎನ್-95 ಮಾಸ್ಕ್) ಧರಿಸಿರಬೇಕೆಂಬ ಸೂಚನೆ ಮೇಲೆ ಮಹಿಳೆಯನ್ನು ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರತ್ಯೇಕ ವಾರ್ಡು
ಶಂಕಿತ ಕೊರೊನಾ ವೈರಸ್ ಪರೀಕ್ಷೆಗೊಳಗಾದವರ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡನ್ನು ತೆರೆಯಲಾಗಿದೆ. ಇಲ್ಲಿ ನಿಯೋಜಿತರಾದ ಇಬ್ಬರು ವೈದ್ಯರು ಹಾಗೂ ಇಬ್ಬರು ನರ್ಸ್ಗಳನ್ನು ಹೊರತು ಪಡಿಸಿ ಬೇರೆ ಯಾರಿಗೂ ವಾರ್ಡಿನ ಬಳಿ ಸುಳಿಯಲು ಅವಕಾಶ ನೀಡುತ್ತಿಲ್ಲ. ಯಾರೇ ಆದರೂ ದಾರಿ ತಪ್ಪಿಯಾದರೂ ಅಕ್ಕಪಕ್ಕ ಬಾರದಂತೆ ವಾರ್ಡಿನ ಎರಡೂ ಬಾಗಿಲುಗಳಿಗೆ ಸದಾ ಕಾಲ ಬೀಗ ಹಾಕಿಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ರಕ್ತ, ಗಂಟಲು ದ್ರವ ಬೆಂಗಳೂರಿಗೆ
ಚೀನದಿಂದ ಜಿಲ್ಲೆಗೆ ಮರಳಿದ ನಾಲ್ವರ ರಕ್ತ ಹಾಗೂ ಗಂಟಲ ದ್ರವವನ್ನು ಶುಕ್ರವಾರ ಪಡೆದು, ಕೊರೊನಾ ವೈರಸ್ ಪರೀಕ್ಷೆಗಾಗಿ ಬೆಂಗಳೂರಿನ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಆರಂಭಿಸಲಾದ ವೈರಲ್ ಪತ್ತೆ ಪ್ರಯೋಗಾಲಯ (ವಿಡಿಎಲ್)ಕ್ಕೆ ಕಳುಹಿಸಲಾಗಿದೆ. ನಾಲ್ವರ ಪರೀಕ್ಷಾ ವರದಿ ಎರಡು-ಮೂರು ದಿನಗಳಲ್ಲಿ ಬರುವ ನಿರೀಕ್ಷೆ ಇದೆ. ಇದು ನೆಗಟೀವ್ ಆಗಿರುವ ಸಂಪೂರ್ಣ ವಿಶ್ವಾಸವಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕೊರೊನಾ ವೈರಸ್ಗೆ ಇದುವರೆಗೆ ನಿರ್ದಿಷ್ಟವಾದ ಯಾವುದೇ ಔಷಧಿ ಯಾಗಲಿ, ವ್ಯಾಕ್ಸಿನ್ ಆಗಲಿ ಕಂಡು ಹಿಡಿದಿಲ್ಲದ ಕಾರಣ, ವ್ಯಕ್ತಿ ಯಾವ ರೋಗದಿಂದ ನರಳುತಿದ್ದಾರೋ ಅದಕ್ಕೆ ಸೂಕ್ತವಾದ ಔಷಧಿ ನೀಡಲಾಗುತ್ತಿದೆ. ಹೆಚ್ಚಾಗಿ ದೇಹದಲ್ಲಿ ಪ್ರತಿರೋಧದ ಅಂಶ ಕಡಿಮೆ ಇರುವವರು, ಬೇರೆ ಕಾಯಿಲೆಯಿಂದ ನರಳುತ್ತಿರುವವರು ಇದಕ್ಕೆ ಸುಲಭದ ತುತ್ತಾಗುತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.