ಸ್ಕೂಟಿ ಸವಾರಿಣಿಯ ಸರ ಅಪಹರಣ
Update: 2020-02-09 16:54 GMT
ಮಣಿಪಾಲ, ಫೆ.9: ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತ ಅಪಹರಿಸಿರುವ ಘಟನೆ ಫೆ.8ರಂದು ಸಂಜೆ 7.15ರ ಸುಮಾರಿಗೆ ಮೂಡು ಅಲೆವೂರು ವಿಷ್ಣುಮೂರ್ತಿ ದೇವಸ್ಥಾನದ ಬಳಿ ನಡೆದಿದೆ.
ಮಂಡ್ಯ ಮೂಲದ ವೀಣಾ ರಾವ್(51) ಎಂಬವರು ತನ್ನ ಸಂಬಂಧಿಯ ಮನೆಯಾದ ಬೈಲೂರು ವಾಸುಕಿ ನಗರಕ್ಕೆ ಸ್ಕೂಟಿಯಲ್ಲಿ ಹೋಗಿ ಕೊರಂಗ್ರ ಪಾಡಿ, ಕುಕ್ಕಿಕಟ್ಟೆ ಮಾರ್ಗವಾಗಿ ವಾಪಾಸ್ ತನ್ನ ತಾಯಿಯ ಮನೆಯಾದ ಕೊಡಂಗಳಕ್ಕೆ ಬರುತ್ತಿದ್ದರು. ಆಗ ಮೂಡು ಅಲೆವೂರು ವಿಷ್ಣುಮೂರ್ತಿ ದೇವಸ್ಥಾನ ಬಳಿ ಇವರ ಸ್ಕೂಟಿಯನ್ನು ಹಿಂಬಾಲಿಸಿಕೊಂಡು ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ, ಇವರ ಕುತ್ತಿಗೆಯಲ್ಲಿದ್ದ ಸುಮಾರು 45 ಗ್ರಾಂ ತೂಕದ 1.5 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ಎಳೆದು ಪರಾರಿಯಾದನು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.