ಎಎಪಿಯ ಗೆಲುವು ಅಭಿವೃದ್ಧಿಯ ಗೆಲುವು: ಕಬೀರ್ ಕಾಟಿಪಳ್ಳ
ಸುರತ್ಕಲ್, ಫೆ.11: ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದ್ದು, ಜನರು ಪಕ್ಷ ಮಾಡಿರುವ ಅಭಿವೃದ್ಧಿ ಯನ್ನು ಗಮನಿಸಿದ್ದಾರೆ. ಇದು ಅಭಿವೃದ್ಧಿಯ ಗೆಲುವು ಎಂದು ಆಮ್ ಆದ್ಮಿ ಪಾರ್ಟಿಯ ದ.ಕ. ಜಿಲ್ಲಾ ಸಂಯೋಜಕ ಕಬೀರ್ ಕಾಟಿಪಳ್ಳ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜಧಾನಿಯಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಕ್ಷ ಮಾಡಿರುವ ಅಭಿವೃದ್ಧಿಯನ್ನು ಕಂಡು ಬುದ್ಧಿವಂತ ದೆಹಲಿ ಮತದಾರರು ಮತ್ತೆ ಭರ್ಜರಿಯಾಗಿ ಆಮ್ ಆದ್ಮಿ ಪಾರ್ಟಿಯನ್ನು ಗೆಲ್ಲಿಸಿ ಕೊಂಡಿದ್ದಾರೆ. ಜನತೆಯನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಈ ಮೂಲಕ ಕೇವಲ ಸುಳ್ಳು ಭರವಸೆ ಹಾಗೂ ಸುಳ್ಳು ಆಪಾದನೆಗಳನ್ನು ಮಾಡಿ ಗೆಲ್ಲುವುದು ಅಸಾಧ್ಯ ಎಂಬುದನ್ನು ಜನ ತೋರಿಸಿಕೊಟ್ಟಿದ್ದಾರೆ. ಇತರ ರಾಜ್ಯಗಳಲ್ಲೂ ಸತ್ಯ, ಪ್ರಾಮಾಣಿಕತೆಗೆ ಗೆಲುವು ಲಭಿಸುವಂತಾಗಬೇಕು ಎಂದು ತಿಳಸಿರುವ ಅವರು, ಸುಳ್ಳು ಭರವಸೆಗಳು ಹಾಗೂ ಆಪಾದನೆಗಳಿಗೆ ದೇಶದ ಮತದಾರರು ತಕ್ಕ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.