ಕೊಲ್ಲೂರು: ಉಚಿತ ಸಾಮೂಹಿಕ ವಿವಾಹದ ಸಪ್ತಪಧಿ ರಥಕ್ಕೆ ಚಾಲನೆ

Update: 2020-02-13 15:26 GMT

ಕೊಲ್ಲೂರು, ಫೆ.13: ರಾಜ್ಯ ಸರಕಾರದ ಯೋಜನೆಯಾದ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹದ ಕುರಿತು ವ್ಯಾಪಕ ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುವ ಸಪ್ತಪಧಿ ರಥಕ್ಕೆ ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡ ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 3400ಕ್ಕೂ ಅಧಿಕ ದೇವಾಲಯಗಳಿದ್ದು, ಉತ್ತಮ ಆದಾಯ ಇರುವ 195ರಿಂದ 200 ದೇವಾಲಯಗಳಲ್ಲಿ ಎಪ್ರಿಲ್ 26ರಂದು ರಾಜ್ಯದ 100 ಎ ದರ್ಜೆಯ ದೇವಾಲಯಗಳಲ್ಲಿ ಹಿಂದೂ ಸಂಪ್ರದಾಯದಂತೆ ಸಾಮೂಹಕ ವಿವಾಹ ನಡೆಸಲಾಗುತ್ತಿದೆ. ಉಚಿತ ಸಾಮೂಹಿಕ ವಿವಾಹಕ್ಕೆ ಎಷ್ಟೇ ವಧು-ವರರು ಬಂದರೂ ಯಾವುದೇ ಅಡೆ-ತಡೆಗಳಿಲ್ಲದಂತೆ ವ್ಯವಸ್ಥಿತ ರೀತಿಯಲ್ಲಿ ವಿವಾಹ ಕಾರ್ಯ ನೆರವೇರಿಸಲು ಸಿದ್ದರಿದ್ದೇವೆ. ಈ ಮೂಲಕ ದೇವಸ್ಥಾನದ ಹಣ ಸೂಕ್ತ ರೀತಿಯಲ್ಲಿ ಬಡಜನರಿಗೆ ನೆವಾಗಲಿದೆ ಎಂದು ಅವರು ಹೇಳಿದರು.

ಸಪ್ತಪದಿ ಉಚಿತ ಸಾಮೂಹಿಕ ವಿವಾಹ ರಥವು ಪ್ರತೀ ಗ್ರಾಮ, ಹಳ್ಳಿಗಳ ಜನ ನಿಬಿಡ ಪ್ರದೇಶಗಳಿಗೆ ತೆರಳಿ ಸಪ್ತಪದಿ ಸಾಮೂಹಿಕ ವಿವಾಹದ ಕುರಿತು ಕರಪತ್ರ ಮತ್ತು ಅಗತ್ಯ ಮಾಹಿತಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಿದೆ ಎಂದರು.

ಸಾಮೂಹಿಕ ವಿವಾಹಕ್ಕಾಗಿ ಈಗಾಗಲೇ ಕೊಲ್ಲೂರಿನಲ್ಲಿ 16 ಅರ್ಜಿಗಳನ್ನು ಸಾರ್ವಜನಿಕರು ಪಡೆದಿದ್ದು, ಈ ದೇವಸ್ಥಾನದಲ್ಲಿ 100ಕ್ಕೂ ಅಧಿಕ ವಿವಾಹಾಕಾಂಕ್ಷಿಗಳಿಂದ ಅರ್ಜಿ ಬರುವ ನಿರೀಕ್ಷೆ ಇದೆ. ರಾಜ್ಯದಾದ್ಯಂತ ಸುಮಾರು 1000ಕ್ಕೂ ಅಧಿಕ ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಸೆಮಣೆ ಏರುವ ನಿರೀಕ್ಷೆ ಇದ್ದು,ವಿವಾಹದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಧು ವರರು ಮುಂಚಿತವಾಗಿಯೇ ದೇವಸ್ಥಾನದಲ್ಲಿ ಅರ್ಜಿಯನ್ನು ಪಡೆದು ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ಸಂಬಂದಪಟ್ಟ ದೇವಸ್ಥಾನದ ಕಚೇರಿಗೆ ಮಾ.27ರೊಳಗೆ ನೊಂದಾಯಿಸಿ ಕೊಳ್ಳಬಹುದು ಎಂದವರು ತಿಳಿಸಿದರು.

ಸಾಮೂಹಿಕ ವಿವಾಹವನ್ನು ವ್ಯವಸ್ಥಿತವಾಗಿ,ಬಹಳ ಜಾಗೃತೆಯಿಂದ ಮನೆಯ ಮದುವೆಯಂತೆಯೇ ಮುತುವರ್ಜಿಯಿಂದ ನಡೆಸಿ ಕಾರ್ಯ ಕ್ರಮವನ್ನು ಯಶಸ್ವಿ ಗೊಳಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿೆ ಸಚಿವ ಕೋಟ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್ ಶೆಟ್ಟಿ, ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಸುತ್ತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಕೊಲ್ಲೂರು ಗ್ರಾಪಂ ಅಧ್ಯಕ್ಷ ಪ್ರಕಾಶ್, ಜಿಪಂ ಸದಸ್ಯರಾದ ಬಾಬು ಹೆಗ್ಡೆ, ಬಟವಾಡೆ ಸುರೇಶ್ ಹಾಗೂ ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಹರಿ, ರಮೇಶ್ ಗಾಣಿಗ, ಜಯಂತಿ ವಿಜಯಕೃಷ್ಣ, ಅಂಬಿಕಾ ದೇವಾಡಿಗ, ಶ್ರೀಧರ ಅಡಿಗ, ಗ್ರೀಷ್ಮಾ ಭಿಡೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News