ಅಡುಗೆ ಅನಿಲ ದರ ಏರಿಕೆ, ‘ದೇಶದ ಹಿತಕ್ಕಾಗಿ ಸಬ್ಸಿಡಿ ತ್ಯಾಗ ಮಾಡಿದ ಜನತೆಗೆ ಹೊಡೆತ’: ಕಾಂಗ್ರೆಸ್ ಟೀಕೆ

Update: 2020-02-13 17:15 GMT

ಉಡುಪಿ, ಫೆ.13:ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುವಂತೆಯೇ ಕೇಂದ್ರ ಸರಕಾರ ಒಂದೇ ದಿನದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ ರೂ.144.50 ಏರಿಕೆ ಮಾಡಿರುವುದನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.

ಕಳೆದ ತಿಂಗಳು ರೂ.697 ಇದ್ದ 14.2 ಕೆ.ಜಿ ಸಿಲಿಂಡರ್ ಬೆಲೆಯನ್ನು ಸರಕಾರ ಒಮ್ಮಿಂದೊಮ್ಮೆಗೆ ರೂ.842.50ಗೆ ಹೆಚ್ಚಿಸಿದೆ. ಸರಕಾರ ಗೃಹ ಬಳಕೆದಾರರಿಗೆ ನೀಡುವ ಸಬ್ಸಿಡಿ ದರವನ್ನು ರೂ.154ರಿಂದ ರೂ.291ಕ್ಕೆ ಏರಿಕೆ ಮಾಡಿದ್ದರೂ ಸಬ್ಸಿಡಿ ಪಡೆಯುವ ಗ್ರಾಹಕರು ರೂ.8ನ್ನು ಹೆಚ್ಚುವರಿಯಾಗಿ ನೀಡಬೇಕಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಸರಕಾರದ ಈ ನಡೆಯಿಂದ ದೇಶದ ಹಿತಕ್ಕಾಗಿ ಸಬ್ಸಿಡಿ ತ್ಯಾಗ ಮಾಡಿದ ಗ್ರಾಹಕರಿಗೆ ಒಮ್ಮೆಲೆ ರೂ.145 ಹೆಚ್ಚುವರಿ ಹೊಡೆತ ಬೀಳುವುದರೊಂದಿಗೆ 2014ರ ಬಳಿಕ ಅಡುಗೆ ಅನಿಲದ ಸಿಲಿಂಡರ್ ದರ ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಂತಾಗಿದೆ. ದೇಶವು ನಿರುದ್ಯೋಗ ಹಾಗೂ ಆರ್ಥಿಕ ಸಂಕಷ್ಟದ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿರುವಾಗ ಎಲ್‌ಪಿಜಿ ದರ ಏರಿಕೆ ಮಾಡುವ ಮೂಲಕ ಮೋದಿ ಸರಕಾರ ಜನತೆಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿಕೆ ಟೀಕಿಸಿದೆ.

ಯುಪಿಎ ಸರಕಾರದ ಅವಧಿಯಲ್ಲಿ ಬೆಲೆ ಏರಿಕೆ ಬಗ್ಗೆ ನಿರಂತರ ಪ್ರತಿಭಟನೆ ಮೂಲಕ ವಿರೋಧಿಸುತಿದ್ದ ಬಿಜೆಪಿ, ತನ್ನ ಆಡಳಿತಾವಧಿಯಲ್ಲಿ ಬೆಲೆ ಏರಿಕೆ ಯನ್ನು ನಿರಂತರ ಕಾಯಕವನ್ನಾಗಿಸಿಕೊಂಡಿದೆ. ಈಗಾಗಲೇ ಬಡ ಹಾಗೂ ಮಧ್ಯಮ ವರ್ಗ ಬೆಲೆ ಏರಿಕೆಯಿಂದ ತತ್ತರಿಸಿದ್ದು, ಎಲ್‌ಪಿಜಿ ದರ ಏರಿಕೆ ತೀರ್ಮಾನ ಜನತೆಯನ್ನು ಸಂಕಷ್ಟಕ್ಕೆ ನೂಕಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News