ಗಂಗಾಕಲ್ಯಾಣ ಯೋಜನೆ: ಜಿಲ್ಲೆಗೆ ಮಾರ್ಗಸೂಚಿ ಬದಲಿಸಲು ಮನವಿ
Update: 2020-02-14 22:30 IST
ಉಡುಪಿ, ಫೆ.14: ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಒಂದು ಎಕರೆ ಜಾಗ ಇರಬೇಕು ಎಂದು ಮಾರ್ಗಸೂಚಿ ಇದ್ದು, ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ ಒಂದು ಎಕರೆಗೆ ಬದಲಾಗಿ ಅರ್ಧ ಎಕರೆಗೆ ಮಿತಿ ಗೊಳಿಸಬೇಕು, ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಅಗತ್ಯ ಕ್ರಮವಹಿಸಬೇಕು ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಗಳ ಆಯೋಗದ ಅಧ್ಯಕ್ಷರಿಗೆ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಮನವಿ ಸಲ್ಲಿಸಿದ್ದಾರೆ.
ಗುರುವಾರ ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷರೊಂದಿಗೆ, ರಾಜ್ಯದ ಪರಿಶಿಷ್ಟ ಜಾತಿಯ ಸಚಿವರು, ಶಾಸಕರು ಹಾಗೂಜಿಪಂ ಅಧ್ಯಕ್ಷರುಗಳೊಂದಿಗೆ ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ಮನವಿ ಮಾಡಿದರು.
ಸಭೆಯಲ್ಲಿ ರಾಷ್ಟ್ರೀಯ ಆಯೋಗದ ಸದಸ್ಯರು, ಶಾಸಕರು, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ವಿವಿಧ ಜಿಪಂಗಳ ಅಧ್ಯಕ್ಷರು ಉಪಸ್ಥಿತರಿದ್ದರು.