ನೀರು ಸರಬರಾಜು ಗುತ್ತಿಗೆಯಲ್ಲಿ ಅಕ್ರಮ: ಲೋಕಾಯುಕ್ತಕ್ಕೆ ದೂರು
ಮಂಗಳೂರು, ಫೆ.15: ತಾಲೂಕಿನ ಮುನ್ನೂರು ಗ್ರಾಪಂ ಸದಸ್ಯ ಇಜಾಜ್ ಎಂಬವರು ಕುಡಿಯುವ ನೀರಿನ ಸರಬರಾಜು ಗುತ್ತಿಗೆಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿ ಮೂವರು ಪಿಡಿಒಗಳ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿದೆ.
ಬೆಳ್ಮ ಗ್ರಾಪಂ ವ್ಯಾಪ್ತಿಯಲ್ಲಿ 12.14 ಲಕ್ಷ, ಅಂಬ್ಲಮೊಗರು ಗ್ರಾಪಂ ವ್ಯಾಪ್ತಿ 3.96 ಲಕ್ಷ, ಕಿನ್ಯ ಗ್ರಾಪಂ ವ್ಯಾಪ್ತಿ 7.37 ಲಕ್ಷ ರೂ. ಅವ್ಯವಹಾರ ನಡೆದಿದ್ದು, ಎಲ್ಲ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಗುತ್ತಿಗೆಯನ್ನು ಮುನ್ನೂರು ಗ್ರಾಪಂ ಸದಸ್ಯ ಇಜಾಜ್ ವಹಿಸಿಕೊಂಡಿದ್ದರು. ಮೂರು ಪಂಚಾಯತ್ಗಳ ಮೂವರು ಪಿಡಿಒಗಳು ಹಾಗೂ ಪಂಚಾಯತ್ ಸದಸ್ಯರು ಸೇರಿಕೊಂಡು ಅವ್ಯವಹಾರ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಮೂವರು ಪಿಡಿಒಗಳು ಟೆಂಡರ್ ಕರೆಯದೇ ಗುತ್ತಿಗೆಯನ್ನು ಗ್ರಾಪಂ ಸದಸ್ಯರೊಬ್ಬರಿಗೆ ನೀಡುವುದು ಕಾನೂನು ವಿರೋಧಿಯಾಗಿದೆ ಎಂದು ಮುನ್ನೂರು ಗ್ರಾಮದ ಮದನಿನಗರ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ನೀಡಿದ ದೂರಿನಂತೆ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿದೆ.