ಕಾಜೂರು ಶೈಕ್ಷಣಿಕ ಕ್ಷೇತ್ರವಾಗಿ ಬೆಳೆಯಲಿ: ವೈ.ಅಬ್ದುಲ್ಲ ಕುಂಞಿ

Update: 2020-02-17 04:50 GMT

ಬೆಳ್ತಂಗಡಿ, ಫೆ.16: ಕಾಜೂರನ್ನು ಶೈಕ್ಷಣಿಕ ಕ್ಷೇತ್ರವಾಗಿ ಬೆಳೆಸುವ ಅಗತ್ಯವಿದೆ. ಇಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಸಮಿತಿ ಪ್ರಯತ್ನಿಸಬೇಕು ಎಂದು ದ.ಕ. ಜಿಲ್ಲಾ ಮುಸ್ಲಿಮ್ ಜಮಾಅತ್ ಅಧ್ಯಕ್ಷ, ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲ ಕುಂಞಿ ಸಲಹೆ ನೀಡಿದ್ದಾರೆ.

ಕಾಜೂರು ದರ್ಗಾ ಶರೀಫ್‌ನ ಉರೂಸ್ ಕಾರ್ಯಕ್ರಮದ ಅಂಗವಾಗಿ ರವಿವಾರ ಆಯೋಜಿಸಿದ್ದ ಸರ್ವಧರ್ಮೀಯರ ಸೌಹಾರ್ದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಜೂರು ತನ್ನ ಪ್ರೀತಿಯ ಕ್ಷೇತ್ರವಾಗಿದ್ದು, ಇಲ್ಲಿ ವಿದ್ಯಾಸಂಸ್ಥೆ ಮಾಡುವುದಾದಲ್ಲಿ ತನ್ನ ಸಂಪೂರ್ಣ ಸಹಕಾರವಿದೆ ಎಂದವರು ಘೋಷಿಸಿದರು.

ಸಂದೇಶ ಭಾಷಣ ಮಾಡಿದ ಚೊಕ್ಕಬೆಟ್ಟು ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ, ಭಾರತ ಶತಶತಮಾನಗಳಿಂದಲೂ ಸೌಹಾರ್ದ ಸಂದೇಶವನ್ನು ಜಗತ್ತಿಗೆ ಸಾರಿದ ದೇಶ. ಇದೇ ನಮ್ಮ ಅತೀ ದೊಡ್ಡ ಸಂಪತ್ತು. ಈ ವಿಚಾರದಲ್ಲಿ ಕಾಜೂರು ನೀಡಿದ ಕೊಡುಗೆ ಮಹತ್ವದ್ದು. ಇಲ್ಲಿ ಈಗಲೂ ಸರ್ವಧರ್ಮೀಯರ ಸಹಕಾರದೊಂದಿಗೆ ಉರೂಸ್ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲರಿಗೂ ಮಾದರಿಯಾಗಿದೆ ಎಂದರು.

ಅಸ್ಸೈಯದ್ ಕೆ.ಪಿ.ಝೈನುಲ್ ಅಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ಮಾತನಾಡಿ, ಇಂದು ಮಾನವೀಯತೆ ಅತೀ ಅಗತ್ಯವಾಗಿದ್ದು. ಜಗತ್ತಿನಲ್ಲಿ ನೆಮ್ಮದಿ, ಶಾಂತಿ ನೆಲೆಸಬೇಕಾದರೆ ಮಾನವೀಯತೆ ಅಗತ್ಯ ಎಂದರು.

ಕುಂಬೋಳ್ ಕೆ.ಎಸ್.ಆಟಕ್ಕೋಯ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ವಕ್ಫ್‌ಮಂಡಳಿ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ, ಅಬ್ದುಲ್ ಅಝೀಝ್, ಮಾಜಿ ಶಾಸಕರಾದ ವಸಂತ ಬಂಗೇರ, ಗಂಗಾಧರ ಗೌಡ, ಬಿಬಿಎಂಪಿ ಸದಸ್ಯ ಮುಜಾಹಿದ್ ಪಾಶ, ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ, ಉಪ್ಪಿನಂಗಡಿ ಮಸೀದಿಯ ಅಧ್ಯಕ್ಷ ಮುಸ್ತಫ ಕೆಂಪಿ, ಉದ್ಯಮಿಗಳಾದ ರಂಜನ್ ಗೌಡ, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ.ನಝೀರ್, ಮಿತ್ತಬಾಗಿಲು ಗ್ರಾಪಂ ಅಧ್ಯಕ್ಷ ನಾರಾಯಣ ಪಾಟಾಲಿ, ಮಲವಂತಿಗೆ ಗ್ರಾಪಂ ಅಧ್ಯಕ್ಷ ಭಾಸ್ಕರ್ ಪೂಜಾರಿ, ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ, ನ್ಯಾಯವಾದಿ ಸುದರ್ಶನ ರಾವ್, ತಾಪಂ ಮಾಜಿ ಅಧ್ಯಕ್ಷ ಮುಕುಂದ ಸುವರ್ಣ, ನಾಮ್ ದೇವರಾವ್, ಶಿವಶಂಕರ, ಮೋಹನ್ ಗೌಡ ಬೆಡಿಗುತ್ತು, ತುಂಗಪ್ಪಪೂಜಾರಿ ಅಗರಿಮಾರು, ಬಿ.ಎಂ.ಹಮೀದ್ ಉಜಿರೆ ವೇದಿಕೆಯಲ್ಲಿದ್ದರು. ಸಮಿತಿಯ ಉಪಾಧ್ಯಕ್ಷ ಕೆ.ಮುಹಮ್ಮದ್ ಕಿಲ್ಲೂರು, ಕಾರ್ಯದರ್ಶಿ ಕಾಸೀಂ ಮಲ್ಲಿಗೆಮನೆ, ಕೋಶಾಧಿಕಾರಿ ಕೆ.ಎಂ.ಕಮಾಲ್ ಕಾಜೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕುಂಬೋಳ್ ತಂಙಳ್, ವೈ.ಅಬ್ದುಲ್ಲಾ ಕುಂಞಿ, ಶಾಫಿ ಸಅದಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಹಾಗೂ ದರ್ಗಾ ಸಮಿತಿಯ ಅಧ್ಯಕ್ಷ ಕೆ.ಯು.ಇಬ್ರಾಹೀಂರನ್ನು ಸನ್ಮಾನಿಸಲಾಯಿತು.

ಉರೂಸ್ ಸಮಿತಿಯ ಅಧ್ಯಕ್ಷ ಕೆ.ಯು.ಇಬ್ರಾಹೀಂ ಸ್ವಾಗತಿಸಿದರು. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ವಂದಿಸಿದರು.

ಕಳೆದ 8 ವರ್ಷಗಳ ಹಿಂದೆ ನಡೆದಿದ್ದ ಉರೂಸ್ ಬಳಿಕದ ದಿನಗಳಲ್ಲಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಉರೂಸ್ ಸಂಭ್ರಮಾಚರಣೆಗೆ ಊರ ಪರವೂರ ಜನರು ಸಾಕ್ಷಿಯಾಗುವುದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಮಾಪನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News