ದಲಿತ ಯೋಧನ ಮದುವೆ ಮೆರವಣಿಗೆಗೆ ಕಲ್ಲು ತೂರಾಟ ನಡೆಸಿದ ಮೇಲ್ಜಾತಿ ಜನರು
ಅಹ್ಮದಾಬಾದ್: ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ದಲಿತ ಯೋಧ ಆಕಾಶ್ ಕೊಟಡಿಯಾರ ಮದುವೆ ಮೆರವಣಿಗೆ ಗುಜರಾತ್ ರಾಜ್ಯದ ಬಾನಸ್ಕಂತ ಜಿಲ್ಲೆಯ ಸಂಡಿಪಡ ಎಂಬ ಗ್ರಾಮದಲ್ಲಿ ಸಾಗುತ್ತಿದ್ದಾಗ ಕೆಲ ಮೇಲ್ವರ್ಗದ ಜನರು ಮೆರವಣಿಗೆಯತ್ತ ಕಲ್ಲು ತೂರಾಟ ನಡೆಸಿದ್ದಾರೆ.
"ಆಕಾಶ್ ತಮ್ಮ ವಿವಾಹಕ್ಕಾಗಿ ಗ್ರಾಮಕ್ಕೆ ಕೆಲ ದಿನಗಳ ಹಿಂದೆ ಹಿಂದಿರುಗಿದ್ದರು. ಮೆರವಣಿಗೆ ನಡೆಸುವುದಕ್ಕೆ ಕೆಲ ಮೇಲ್ಜಾತಿ ಜನರು ವಿರೋಧ ಸೂಚಿಸಿದ್ದರೂ ಅದನ್ನು ಲೆಕ್ಕಿಸದೆ ಮೆರವಣಿಗೆ ನಡೆಸಿದಾಗ ಕಲ್ಲು ತೂರಾಟ ನಡೆಸಲಾಯಿತು. ಘಟನೆಯಲ್ಲಿ 60 ವರ್ಷದ ವ್ಯಕ್ತಿಯೊಬ್ಬರು ಹಾಗೂ ಗಾರ್ಭಾ ನೃತ್ಯ ಮಾಡುತ್ತಿದ್ದ ಕೆಲ ಮಹಿಳೆಯರು ಗಾಯಗೊಂಡಿದ್ದಾರ'' ಎಂದು ಗ್ರಾಮದ ದಲಿತ ಸಮಾಜ ಅಧ್ಯಕ್ಷ ದಲಪತ್ ಭಾಯಿ ಭಾಟಿಯಾ ತಿಳಿಸಿದ್ದಾರೆ.
ವರ ಏರಿದ್ದ ಕುದುರೆಯನ್ನು ಠಾಕುರ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ನೀಡಿದ್ದರೆಂದೂ ಅವರು ಹೇಳಿದರು.
ನಂತರ ಪೊಲೀಸ್ ರಕ್ಷಣೆಯಲ್ಲಿ ಮೆರವಣಿಗೆ ಮುಂದಕ್ಕೆ ಸಾಗಿದೆ. ಕಲ್ಲು ತೂರಾಟ ನಡೆಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.