ವಸತಿ ಸಮುಚ್ಚಯದಲ್ಲಿ ಮಳೆ ನೀರು ಕೊಯ್ಲು ಎಲ್ಲರಿಗೂ ಮಾದರಿ: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-02-18 14:34 GMT

ಉಡುಪಿ, ಫೆ.18: ಉಡುಪಿ ಜಿಲ್ಲೆಗೆ ಬಹಳ ಅಗತ್ಯವಿರುವ ಮಳೆ ನೀರು ಕೊಯ್ಲು ಕಾರ್ಯಕ್ರಮವನ್ನು ಉಡುಪಿಯ ವಸತಿ ಸಮುಚ್ಚಯದಲ್ಲಿ ಮಾಡಿರು ವುದು ಮಾದರಿಯ ಕೆಲಸ. ಈ ಕೆಲಸ ಜಿಲ್ಲೆಯ ಇತರ ವಸತಿ ಸಮುಚ್ಛಯ ಗಳಿಗೆ ಪ್ರೇರಣೆಯಾಗಲಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಮಂಗಳವಾರ ಉಡುಪಿಯ ಪೊಲೀಸ್ ಮೈದಾನದ ಬಳಿಯ ವಸತಿ ಸಮುಚ್ಚಯ ‘ಸಾಯಿರಾಧಾ ಎನ್‌ಕ್ಲೇವ್’ನಲ್ಲಿ ನಡೆದ ಮಳೆಗಾಲದಲ್ಲಿ ಬೀಳುವ ಶುದ್ಧ ಮಳೆ ನೀರನ್ನು ತಡೆ ಹಿಡಿದು ತೆರೆದ ಬಾವಿ ಹಾಗೂ ಕೊಳವೆ ಬಾವಿಗೆ ವ್ಯವಸ್ಥಿತವಾಗಿ ಶೋಧಿಸಿ ಇಂಗಿಸಿ ಭೂಗರ್ಭದ ಅಂತರ್ಜಲ ಮಟ್ಟವನ್ನು ಏರಿಸುವ ಹಾಗೂ ‘ನಾವು ಬಳಸುವ ನೀರಿಗೆ ನಾವೇ ಜವಾಬ್ದಾರರು, ಸರಕಾರಕ್ಕೆ ನೀರಿನ ಹೊರೆ ಸಲ್ಲದು’ ಎಂಬ ಉದ್ದೇಶದಿಂದ ನಿರ್ಮಾಣ ಮಾಡಲಾದ ಮಾದರಿ ಘಟಕದ ಉದ್ಘಾಟನೆಯ ವೇಳೆ ತೆರೆದ ಬಾವಿಯ ಮಳೆ ನೀರ ಕೊಯ್ಲು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬರದ ನಾಡಿನಲ್ಲಿ ನೀರನ್ನು ಚಿನ್ನದಂತೆ ನೋಡಲಾಗುತ್ತಿದೆ.ಅಲ್ಲಿ ಹನಿ ನೀರನ್ನು ಬಹಳ ಸೂಕ್ಷ್ಮವಾಗಿ ಬಳಸಿಕೊಳ್ಳಲಾಗುತ್ತಿದೆ. ನೀರಿನ ಮಹತ್ವ ಅರಿತು ಇತ್ತೀಚೆಗೆ ಉಡುಪಿಯಲ್ಲಿ ಹರಿಯುವ ನದಿಗೆ ಕಿಂಡಿ ಅಣೆಕಟ್ಟನ್ನು ಕಟ್ಟಿ ನೀರನ್ನು ಶೇಖರಿಸಲಾಗುತ್ತಿದೆ. ಮರುಬಳಕೆ ಸಾಧ್ಯವಾಗುತ್ತಿದೆ. ಮಳೆ ಕೊಯ್ಲಿನಂತಹ ಕಾರ್ಯಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು. ಇಂತಹ ಸಮಾಜ ಮುಖಿ ಕಾರ್ಯಗಳಿಗೆ ಜಿಲ್ಲಾಡಳಿತ ಎಂದಿಗೂ ಜೊತೆಯಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.

ಕೊಳವೆ ಬಾವಿಗೆ ಜಲ ಮರುಪೂರಣ ಘಟಕದ ಉದ್ಘಾಟನೆ ಮಾಡಿ ಮಾತನಾಡಿದ ಜಿಪಂ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಜಿಲ್ಲೆಯಲ್ಲಿ ಪ್ರತೀವರ್ಷ 4 ಸಾವಿರ ಮಿ.ಮೀ.ಗಿಂತ ಹೆಚ್ಚು ಮಳೆ ಸುರಿಯುತ್ತಿದೆ. ಆದರೂ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಕಂಡು ಬರುತ್ತಿದೆ. ಆದ್ದರಿಂದ ನೀರನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಎಲ್ಲರೂ ನೀರನ್ನು ಸಂರಕ್ಷಿಸುವ ಕೆಲಸಕ್ಕೆ ಕೈ ಜೋಡಿಸಬೇಕು. ತೆರೆದ ಬಾವಿ ಹಾಗೂ ಕೊಳವೆ ಬಾವಿ ಜಲ ಪೂರಣ ಕಾರ್ಯಕ್ರಮ ಎಲ್ಲರಿಗೂ ಮಾರ್ಗದರ್ಕವಾಗಿ ಕೆಲಸ ಮಾಡಲಿದೆ ಎಂದರು.

ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ರಾಜ್, ಮಳೆ ನೀರಿನೊಂದಿಗೆ ಅನು ಸಂಧಾನ, ಜಲ ಜಾಗೃತಿ-ಜಲ ಸಂರಕ್ಷಣೆ-ಜಲ ಮರು ಪೂಣ ಲೋಗೋ ಬಿಡುಗಡೆ ಮಾಡಿದರು.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಜಲ ಸಂರಕ್ಷಣೆ ಕುರಿತ ಕರಪತ್ರ ಬಿಡುಗಡೆಗೊಳಿಸಿದರು. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೋಸೆಫ್ ಜಿ.ಎಂ.ರೆಬೆಲ್ಲೊ ಪ್ರಾಸ್ತಾವಿಕವಾಗಿ ಮಾತನಾಡಿ, ಈ ವಸತಿ ಸಮುಚ್ಛಯದಲ್ಲಿ ಮಳೆಗಾಲದಲ್ಲಿ ಟೆರೇಸ್ ಮೇಲೆ ಬಿದ್ದ ಮಳೆ ನೀರನ್ನು ಪೈಪ್‌ಗಳ ಮೂಲಕ ಜಲ್ಲಿ, ಮರಳು ಹಾಗೂ ಸ್ಪಾಂಜ್ ಬಳಸಿ ಸಿಂಟೆಕ್ಸ್‌ನಲ್ಲಿ ಶುದ್ಧೀಕರಿಸಿ, ಬಾವಿ ಹಾಗೂ ಬೋರ್‌ವೆಲ್‌ಗೆ ಶುದ್ಧೀಕರಿಸಿದ ನೀರನ್ನು ಬಿಡುವ ಮೂಲಕ ಅಂತರ್‌ಜಲ ಮಟ್ಟವನ್ನು ಏರಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಾಯಿರಾಧಾ ಎನ್‌ಕ್ಲೇವ್ ಉಡುಪಿ ವಸತಿ ಸಮುಚ್ಚಯ ಅಧ್ಯಕ್ಷ ಎನ್ ಕ್ಠೃಷ್ಣಸ್ವಾಮಿ ಭಟ್, ಕೋಶಾಧಿಕಾರಿ ಸತೀಶ್ ಭಟ್, ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮವನ್ನು ವಸತಿ ಸಮುಚ್ಚಯದ ಕಾರ್ಯದರ್ಶಿ ಜಗದೀಶ್ ಕುಮಾರ್ ನಿರೂಪಿಸಿದರು. ಜೋಸೆಫ್ ಜಿ.ಎಂ. ರೆಬೆಲ್ಲೊ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News