ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿಗೆ ತಬಸ್ಸುಮ್ ಆಯ್ಕೆ

Update: 2020-02-19 12:00 GMT
ತಬಸ್ಸುಮ್

ಮಂಗಳೂರು, ಫೆ.19:ಎಚ್‌ಐವಿ/ಏಡ್ಸ್ ಪೀಡಿತ ಮಕ್ಕಳನ್ನು ತಾಯಿಯಂತೆ ಸಲಹುವ ಮೂಲಕ ಮಾನವೀಯ ಸೇವೆ ಮಾಡುತ್ತಿರುವ ತಬಸ್ಸುಮ್ ಅವರು ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೊ. ಬಾಲಕೃಷ್ಣ ಗಟ್ಟಿ, ಡಾ.ವಸಂತ ಕುಮಾರ್ ಪೆರ್ಲ, ಡಾ.ನಾಗವೇಣಿ ಮಂಚಿ ನೇತೃತ್ವದ ಆಯ್ಕೆ ಸಮಿತಿಯು 2019ನೇ ವರ್ಷದ ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಶಸ್ತಿಗೆ ಕೊಣಾಜೆ ಸಮೀಪದ ತಬಸ್ಸುಮ್ ಅವರನ್ನು ಆಯ್ಕೆ ಮಾಡಿದೆ.

ಫೆ. 29ರಂದು ಪ್ರಶಸ್ತಿ ಪ್ರದಾನ

ಫೆ.29ರಂದು ಉರ್ವ ರಾಧಾಕೃಷ್ಣ ಮಂದಿರದ ಸಭಾಂಗಣದಲ್ಲಿ ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಚ್‌ಐವಿ/ಏಡ್ಸ್ ಎಂಬುದು ಜಗತ್ತನ್ನು ತಲ್ಲಣಗೊಳಿಸಿರುವ ಮಹಾಮಾರಿಯಾಗಿ ಪರಿಣಮಿಸಿದೆ. ಈ ಸೋಂಕಿಗೆ ಎಷ್ಟೋ ಮಂದಿ ಬಲಿಯಾಗಿದ್ದರೆ, ಇನ್ನೇಷ್ಟೋ ಮಂದಿ ಜೀವನ್ಮರಣ ಹೋರಾಟದಲ್ಲೂ ಇದ್ದಾರೆ. ಅದರಲ್ಲೂ ಯಾವುದೇ ತಪ್ಪುಮಾಡದ ಅಮಾಯಕ ಮಕ್ಕಳು ಕೂಡಾ ಎಚ್‌ಐವಿ/ ಏಡ್ಸ್‌ಗೆ ಬಲಿಯಾಗಿದ್ದನ್ನು ಕಂಡಿದ್ದೇವೆ. ಎಚ್‌ಐ ಸೋಂಕಿತ ಮಕ್ಕಳನ್ನು ಅಸ್ಪೃಶ್ಯರಂತೆ ಕಾಣುವ, ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುವ ಅಮಾನವೀಯ ಪರಿಸ್ಥಿತಿಯ ಮಧ್ಯೆ, ಸರಕಾರೇತರ ಸ್ವಯಂಸೇವಾ ಸಂಸ್ಥೆಗಳು ಮತ್ತು ಮಾಧ್ಯಮಗಳ ನಿರಂತರ ಜನಜಾಗೃತಿಯಿಂದ ಎಚ್‌ಐವಿ/ ಏಡ್ಸ್ ಸೋಂಕು ಬಾಧಿತ ಮಕ್ಕಳನ್ನು ಸಾಕಿ ಸಲಹುವ ಕೆಲಸ ಅಲ್ಲಲ್ಲಿ ನಡೆಯುತ್ತಿದೆ. ಆ ಪೈಕಿ ಬಹುತೇಕ ತಂದೆ ತಾಯಿಯನ್ನು ಕಳೆದುಕೊಂಡಿರುವ ಅನಾಥ ಮಕ್ಕಳಿಗೆ ತಾಯಿಯಯಂತೆ ಸಲಹುವ ಮಾನವೀಯ ಕೆಲಸ ಮಾಡುತ್ತಿರುವ ತಬಸ್ಸುಮ್ ಅವರು ಆರ್ಥಿಕವಾಗಿ ಹಿಂದುಳಿದ ತುಂಬು ಸದಸ್ಯರ ಕುಟುಂಬದಲ್ಲಿ ಹುಟ್ಟಿ ಬೆಳೆದವರು.

ಅಬ್ದುಲ್ ಸಮದ್ ಮತ್ತು ಖೈರುನ್ನಿಸಾ ದಂಪತಿಯ ಪುತ್ರಿಯಾದ ತಬಸ್ಸುಮ್. ಶಾಲೆ ಕಾಲೇಜಿನ ಓದಿನಲ್ಲಿ ಮುಂಚೂಣಿಯಲ್ಲಿ ಮಾತ್ರವಲ್ಲ, ಎಲ್ಲ ಪರೀಕ್ಷೆಗಳಲ್ಲೂ ಪ್ರಥಮ ಸ್ಥಾನವನ್ನೇ ಪಡೆಯುತ್ತಿದ್ದರು. ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡಬೇಕು ಎಂಬ ಕನಸುಗಳಿದ್ದರೂ, ಮನೆಯಿಂದ ಪೂರಕ ಸಹಕಾರ ಸಿಗುತ್ತಿರಲಿಲ್ಲ. ಪದವಿ ತರಗತಿ ಆರಂಭಿಸುವಾಗಲೇ ಮದುವೆ ಮಾಡಿಕೊಡಲಾಗಿತ್ತು. ಕೌಟುಂಬಿಕ ಜೀವನದ ನಡುವೆ, ಸಮಾಜಕ್ಕೆ ಏನಾದರೊಂದು ಮಾಡಬೇಕು ಎಂಬ ಅವರ ಹಠ ಸಾಧನೆಯಿಂದಲೇ ಇಂದು ಎಚ್‌ಐವಿ/ಏಡ್ಸ್ ಬಾಧಿತ ಹೆಣ್ಮಕ್ಕಳನ್ನು ಸಾಕಿ ಸಲಹುವ ಸ್ನೇಹದೀಪ್ ಸಂಸ್ಥೆ ಕಾರ್ಯಾಚರಿಸುವಂತಾಗಿದೆ.

ತನ್ನ ಗೆಳತಿಯೊಬ್ಬಳು ಏಡ್ಸ್‌ಗೆ ತುತ್ತಾಗಿ ಸಾವನ್ನಪ್ಪಿ, ಅವರ ಮಕ್ಕಳು ಅನಾಥರಾಗಿದ್ದನ್ನು ಕಂಡು ಬೇಸರಗೊಂಡಿದ್ದ ತಬಸ್ಸುಮ್ ಅಂದೇ ಎಚ್‌ಐವಿ/ಏಡ್ಸ್ ಪೀಡಿತ ಹೆಣ್ಣು ಮಕ್ಕಳ ಸಂಸ್ಥೆ ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದರು. ಆರಂಭದಲ್ಲಿ ಈ ಮಕ್ಕಳ ಸೇವೆ ಮಾಡುವ ಸಂಸ್ಥೆ ಯನ್ನು ಸೇರಿದ್ದ ಅವರು, ಮುಂದೆ ತನ್ನಲ್ಲಿದ್ದ ಹಣನಿಂದ ಸ್ನೇಹದೀಪ್ ಸಂಸ್ಥೆಯನ್ನು 2011ರಲ್ಲಿ ಹುಟ್ಟುಹಾಕಿದ್ದರು.

ಮಂಗಳೂರಿನ ಬಿಜೈ ಬಳಿ ಕಾರ್ಯಾಚರಿಸುತ್ತಿರುವ ಸ್ನೇಹದೀಪ್‌ನಲ್ಲಿ ಎಚ್‌ಐಇ/ಏಡ್ಸ್‌ನಿಂದ ತಂದೆ- ತಾಯಿಯನ್ನು ಕಳೆದುಕೊಂಡಿರುವ 15 ವರ್ಷ ಪ್ರಾಯದೊಳಗಿನ ಮಕ್ಕಳಿದ್ದಾರೆ. ಬೀದಿ ಪಾಲಾಗಲಿದ್ದ ಎಷ್ಟೋ ಮಕ್ಕಳಿಗೆ ಮಾತೃವಾತ್ಸಲ್ಯ ನೀಡಿ ಹೊಸ ಬದುಕು ಕಟ್ಟುವ ಕೆಲಸವನ್ನು ತಬಸ್ಸುಮ್ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಕೆಲವು ಮಕ್ಕಳ ಜೀವನದ ಅಂತಿಮ ಕ್ಷಣದಲ್ಲಿ ಹತ್ತಿರವಿದ್ದುಕೊಂಡು ತನ್ನ ಸೇವೆ ಮಾಡುತ್ತಿದ್ದಾರೆ. ಒಂದೊಂದು ಮಗುವಿನ ಹಿಂದೆಯೂ ಕಣ್ಣೀರ ಕಥೆಗಳಿವೆ. 19 ಮಕ್ಕಳು ಅವರ ಕೈಯಲ್ಲೇ ಪ್ರಾಣ ಬಿಟ್ಟಿದ್ದು, ಅದನ್ನು ನೆನಪಿಸುವಾಗ ತಬಸ್ಸುಮ್ ದುಃಖ ತಡೆದುಕೊಳ್ಳದೇ ಕಣ್ಣೀರು ಸುರಿಸುತ್ತಾರೆ.

ಕನಿಷ್ಠ ಪಕ್ಷ ಆ ಮಕ್ಕಳಿಗೆ ಪ್ರೀತಿ ವಾತ್ಸಲ್ಯದಿಂದ ಜೀವ ಬಿಡುವ ವ್ಯವಸ್ಥೆ ಮಾಡಿದ ತೃಪ್ತಿ ತಬಸ್ಸುಮ್ ಅವರದ್ದು. ಅಲ್ಲದೆ ಆಯಾ ಮಕ್ಕಳಿಗೆ ಅವರವರ ಧರ್ಮಕ್ಕನುಗುಣವಾಗಿ ಗೌರವಯುತ ಅಂತಿಮ ಸಂಸ್ಕಾರ ಮಾಡಿಸುವ ಜವಾಬ್ದಾರಿ ನಿರ್ವಹಿಸಿ ಕೃತಜ್ಞರಾಗುತ್ತಿದ್ದಾರೆ. ಎಲ್ಲ ಧರ್ಮದ ಮಕ್ಕಳನ್ನೂ ಜಾತಿ, ಧರ್ಮದ ಭೇದಲ್ಲದೆ, ಪ್ರೀತಿ, ಆದರದಿಂದ ಸಲಹುತ್ತಿದ್ದಾರೆ.

ಸ್ನೇಹದೀಪ್‌ನಲ್ಲಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ 26 ಮಕ್ಕಳಿದ್ದಾರೆ. ಅವರಿಗೆ ಶಿಕ್ಷಣ, ಊಟ, ವಸತಿ, ಆರೋಗ್ಯದ ಸೇವೆಯನ್ನು ತನ್ನ ಮೂವರು ಸಿಬ್ಬಂದಿಗಳ ಜತೆ ತಬಸ್ಸುಮ್ ಮಾಡಿಸುತ್ತಿದ್ದಾರೆ. ಎಲ್ಲ ಮಕ್ಕಳು ಕೂಡಾ ತಬಸ್ಸುಮ್ ಅವರನ್ನು ತಾಯಿಯಂತೆ, ಸ್ನೇಹದೀಪ್ ಸಂಸ್ಥೆಯನ್ನು ಸ್ವಂತ ಮನೆಯಂತೆ ಕಾಣುತ್ತಿದ್ದಾರೆ. ತಬಸ್ಸುಮ್ ಅಂಗಡಿಯೊಂದನ್ನು ನಡೆಸುತ್ತಿದ್ದು, ಅದರಿಂದ ಬಂದ ಆದಾಯವನ್ನು ಸ್ನೇಹದೀಪ ಸಂಸ್ಥೆಗೆ ಖರ್ಚು ಮಾಡುತ್ತಿದ್ದಾರೆ. ಜತೆಗೆ ಸ್ಥಳೀಯ ಸಹೃದಯಿ ದಾನಿಗಳಿಂದ ಸಹಾಯ ಪಡೆದು ಸಂಸ್ಥೆ ನಡೆಸುತ್ತಿದ್ದಾರೆ.

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸಂಸ್ಥೆಗೆ ದಾನಿಗಳಿಂದ ನೆರವು ಪಡೆಯುತ್ತಿದ್ದಾರೆ. ಅನೇಕ ಕಷ್ಟದ ಸಂದರ್ಭಗಳು ಬಂದರೂ ಅದನ್ನು ಎದೆಗುಂದದೆ ನಿಭಾಯಿಸಿಕೊಂಡು ಸ್ನೇಹ ದೀಪ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News