ಭಟ್ಕಳ: ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

Update: 2020-02-19 16:25 GMT

ಭಟ್ಕಳ: ಹಿರಿಯ ಕೃಷಿಕರು, ಸಹಕಾರಿಗಳ ಸಹಕಾರದಿಂದ ಆರಂಭವಾದ ಕ್ಯಾಂಪ್ಕೋ ಸಂಸ್ಥೆ 46 ವರ್ಷಗಳಿಂದ ಬೆಳೆದು ಬಂದಿದ್ದು ಇಂದು ದೇಶ ವಿದೇಶಗಳಲ್ಲಿ ಕೂಡಾ ಉತ್ತಮ ಹೆಸರು ಪಡೆದಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ಟ ಖಂಡಿಗೆ ಹೇಳಿದರು. 

ಅವರು ಇಲ್ಲಿನ ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ನೂತನ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  ರೈತರು ಬೆಳೆಯನ್ನು ಬೆಳೆಯದೇ ಸಮಗ್ರ ಕೃಷಿಯತ್ತ ಮನಸ್ಸು ಮಾಡಬೇಕು. ಇದರಿಂದ ರೈತರು ದರ ಕುಸಿತದಿಂದ ತೊಂದರೆಗೊಳಗಾಗುವುದು ತಪ್ಪುತ್ತದೆ. ಸದಾ ಕಾಲ ಸಮಗ್ರ ಕೃಷಿ ರೈತರ ಸಹಾಯಕ್ಕೆ ಬರುವುದು. ಮುಂದಿನ ದಿನಗಳಲ್ಲಿ ಕ್ಯಾಂಪ್ಕೋ ತೆಂಗು ಮತ್ತು ಗೇರು ಬೀಜ ಖರೀದಿಗೂ ಮುಂದಾಗಲಿದೆ ಎಂದು ಹೇಳಿದ ಅವರು ರೈತರು ಗುಣಮಟ್ಟದ ಬೆಳೆಯನ್ನು ಬೆಳೆದು ಉತ್ತಮ ದರವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊನ್ನಾವರ ಎ.ಪಿ.ಎಂ.ಸಿ ಅಧ್ಯಕ್ಷ ಗೋಪಾಲ ಮಂಜಪ್ಪ ನಾಯ್ಕ ವಹಿಸಿದ್ದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಸುರೇಶ ಭಂಡಾರಿ ರೈತರು ಸಂಕಷ್ಟದಲ್ಲಿದ್ದಾಗ ಹುಟ್ಟಿಕೊಂಡ ಸಂಸ್ಥೆಯೇ ಕ್ಯಾಂಪ್ಕೋ ಆಗಿದ್ದು ರೈತರಿಗೆ ಕಳೆದ 46 ವರ್ಷದಿಂದ ಸ್ಥಿರವಾದ ದರವನ್ನು ನೀಡುತ್ತಿದೆ. ಅಡಿಕೆಯನ್ನು ಆಮದು ಮಾಡಿಕೊಳ್ಳುವುದರಿಂದ ಅಡಿಕೆ ದರವು ಕಡಿಮೆಯಾಗುತ್ತದೆ. ಇಂಡೋನೇಷ್ಯಾದಲ್ಲಿ ಅಡಿಕೆ ಬೆಳೆಯು ಕಾಡು ಬೆಳೆಯಾಗಿದ್ದು ಭಾರತಕ್ಕೆ ಅತಿ ಕಡಿಮೆ ಬೆಲೆಯಲ್ಲಿ ಅಡಿಕೆಯನ್ನು ಪೂರೈಸು ತ್ತಾರೆ.  ಆದರೆ ಕ್ಯಾಂಪ್ಕೋ ಅದನ್ನು ಕೂಡಾ ತಡೆಯುವಲ್ಲಿ ಯಶಸ್ವೀಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ವಿಭಾಗೀಯ ಅಧಿಕಾರಿ ಭರತ್ ಭಟ್ಟ, ಉಪ ಪ್ರಧಾನ ವ್ಯವಸ್ಥಾಪಕ ಪ್ರಮೋದ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಪ್ರಾರ್ಥಿಸಿದರು. ಉತ್ತರ ಕನ್ನಡ ನಿರ್ದೇಶಕ ಶಂಭುಲಿಂಗ ಹೆಗಡೆ ಸ್ವಾಗತಿಸಿದರು. ಚಂದ್ರಕಾಂತ್ ನಿರೂಪಿಸಿದರು. ಭರತ್ ಭಟ್ಟ ವಂದಿಸಿದರು. ಪ್ರಥಮ ದಿನವೇ ಅತೀ ಹೆಚ್ಚು ರೈತರು ತಮ್ಮ ಅಡಿಕೆಯನ್ನು ಕೇಂದ್ರಕ್ಕೆ ತರುವ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News