ಮಹಿಳೆಯ ಚಿನ್ನದ ಸರ ಕಸಿದು ಪರಾರಿ

Update: 2020-02-20 14:59 GMT

ಮಂಗಳೂರು, ಫೆ.20: ನಗರದ ಪದವಿನಂಗಡಿ ದೀನಸಿ ಮಳಿಗೆಯೊಂದರ ಬಳಿ ಗುರುವಾರ ಸಂಜೆ ಬೈಕ್‌ನಲ್ಲಿ ಬಂದ ಅಪರಿಚಿತರು ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.

ಪದವಿನಂಗಡಿಯ ಕೊರಗಜ್ಜನ ಕಟ್ಟೆಯ ಹಿಂಬದಿ ಮನೆಯ ರಾಜೇಶ್ವರಿ ಎಂಬವರು ತಮ್ಮ ಮಗಳನ್ನು ಟ್ಯೂಷನ್ ಕ್ಲಾಸ್‌ಗೆ ಬಿಡಲು ತೆರಳಿ ವಾಪಸಾಗುವ ಸಂದರ್ಭ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ರಾಜೇಶ್ವರಿ ಅವರ ಕುತ್ತಿಗೆಯಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.

ಮಹಿಳೆ ಕಿರುಚಾಡಿದಾಗ ಅಲ್ಲಿದ್ದ ಸ್ಥಳೀಯರು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದ್ದು, ಆದರೆ ಅಪರಿಚಿತರು ತಪ್ಪಿಸಿಕೊಂಡು ಪರಾರಿ ಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬೈಕ್‌ನಲ್ಲಿ ನಂಬರ್ ಪ್ಲೇಟ್ ಇಲ್ಲದೆ ಇದ್ದು, ಇಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಂಕನಾಡಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಸರದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಪದವಿನಂಗಡಿ ಪರಿಸರದಲ್ಲಿ ಈ ಹಿಂದೆಯೂ ಕುತ್ತಿಗೆಯಿಂದ ಸರ ಕಸಿದು ಪರಾರಿಯಾದ ಹಲವು ಪ್ರಕರಣಗಳು ನಡೆದಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News