ನಿಟ್ಟೂರು ಒಂಟಿ ಮಹಿಳೆ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2020-02-20 16:29 GMT

ಉಡುಪಿ, ಫೆ.20: ನಿಟ್ಟೂರು ವಿಷ್ಣುಮೂರ್ತಿ ನಗರದ ಒಂಟಿ ಮಹಿಳೆ ಮಾಲತಿ ಕಾಮತ್ (68) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಆನಂದ(28) ಹಾಗೂ ಅಶೋಕ್(38) ಬಂಧಿತ ಆರೋಪಿಗಳು.

ಇವರು ಫೆ.12ರಂದು ರಾತ್ರಿ ವೇಳೆ ಒಂಟಿಯಾಗಿ ವಾಸಮಾಡಿಕೊಂಡಿದ್ದ ಮಾಲತಿ ಕಾಮತ್‌ರ ಮುಖ ಹಾಗೂ ಮೂಗಿನ ಭಾಗಕ್ಕೆ ತಲೆದಿಂಬಿ ನಿಂದ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಅವರ ಮೈಮೇಲಿದ್ದ ಹಾಗೂ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಮತ್ತು 60,000ರೂ. ಕಳವು ಮಾಡಿದ್ದರು. ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಇವರನ್ನು ಖಚಿತ ಮಾಹಿತಿ ಯಂತೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದ ತಂಡ ಹುಬ್ಬಳ್ಳಿಯಲ್ಲಿ ಫೆ.18ರಂದು ಬಂಧಿಸಿ ಉಡುಪಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು ಒಂದು ವಾರ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಹೆಚ್ಚಿನ ತನಿಖೆಗಾಗಿ ಹಾಗೂ ಕಳವು ಮಾಡಿದ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲು ಆರೋಪಿಗಳನ್ನು ಪೊಲೀಸರು ಬೆಳಗಾವಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು ಈ ಹಿಂದೆ ಬೇರೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News