ಒಡ್ಡೂರು ಧರ್ಮಚಾವಡಿಯಲ್ಲಿ ಫೆ.24ರಿಂದ ಶತಚಂಡಿಕಾಯಾಗ, ಧರ್ಮ ನೇಮೋತ್ಸವ

Update: 2020-02-21 14:59 GMT

ಬಂಟ್ವಾಳ, ಫೆ.21: ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ, ಶತಚಂಡಿಕಾಯಾಗ ಹಾಗೂ ಧರ್ಮ ನೇಮೋತ್ಸವವು ಫೆ.24ರಿಂದ 29 ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಬಂಟ್ಬಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು  ಹೇಳಿದ್ದಾರೆ.

ಒಡ್ಡೂರು ತಮ್ಮ ನಿವಾಸದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಕುಟುಂಬಿಕರು ಆರಾಧಿಸಿಕೊಂಡು ಬಂಧಿರುವ ಕೊಡಮಣಿತ್ತಾಯ ದೈವಕ್ಕೆ ಈ ಬಾರಿ ಒಡ್ಡೂರು ಧರ್ಮಚಾವಡಿಯನ್ನು  ನಿರ್ಮಿಸಲಾಗಿದ್ದು ಫೆ.24 ರಿಂದ ಪ್ರತಿನಿತ್ಯ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ ಎಂದರು.

ಫೆ.28ರಂದು ಪೂರ್ವಾಹ್ನ ಧರ್ಮ ದೈವದ ಪ್ರತಿಷ್ಠೆ ಸಹಿತ ವಿವಿಧ ಧಾರ್ಮಿಕ‌ ಕಾರ್ಯಗಳ ಜೊತೆಯಲ್ಲಿ ಸೂರ್ಯೋದಯದಿಂದಲೇ ವಿವಿಧ ಭಜನಾ ತಂಡಗಳ ಭಜನಾ ಕಾರ್ಯ ಆರಂಭವಾಗಲಿದ್ದು ಮಾರನೇ ದಿನದ ಸೂರ್ಯೋದಯದ‌ ತನಕ‌ ನಿರಂತರವಾಗಿ 23 ಭಜನಾ ತಂಡಗಳು ಭಾಗಿಯಾಗಲಿವೆ ಎಂದರು.

ಫೆ.29ರಂದು ಪೂರ್ವಾಹ್ನ ಶತ ಚಂಡಿಕಾಯಾಗ ಆರಂಭವಾಗಿ 11 ಗಂಟೆಗೆ ಪೂರ್ಣಾಹುತಿಯಾಗಲಿದೆ. ಬಳಿಕ 11:30ಕ್ಕೆ ಕೊಡಮಣಿತ್ತಾಯ ದೈವದ ಭಂಡಾರ ಏರಿ, ಪಲ್ಲ ಪೂಜೆಯ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ಮ 2ರಿಂದ ರಾತ್ರಿ 9 ಗಂಟೆಯ ತನಕ ಯಕ್ಷಗಾನ ವೈಭವ, ಪ್ರಶಂಸ ತಂಡದ ಹಾಸ್ಯ, ಜಾನಪದ ಕಾರ್ಯಕ್ರಮಗಳ ಸಹಿತ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಶ್ರೀ ಕೊಡಮಣಿತ್ತಾಯ ದೈವಕ್ಕೆ ಧರ್ಮ ನೇಮೋತ್ಸವ ನಡೆಯಲಿದೆ ಎಂದು ರಾಜೇಶ್ ನಾಯ್ಕ್‌ ವಿವರಿಸಿದರು.

ಕಾರ್ಯಕ್ರಮಕ್ಕೆ ಸಿಎಂ ಸಹಿತ ಮಂತ್ರಿ, ಶಾಸಕರ‌ ದಂಡು

ಶತಚಂಡಿಕಾಯಾಗ ಹಾಗೂ ಧರ್ಮ ನೇಮೋತ್ಸವ ಕ್ಕೆ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ  ಆಗಮಿಸಲಿದ್ದಾರೆ. ಶತಚಂಡಿಕಾಯಾಗ ಪೂರ್ಣಾಹುತಿಯ ಸಂದರ್ಭ ಅವರು ಧರ್ಮ ಚಾವಡಿಗೆ ಭೇಟಿ‌ ನೀಡಲಿದ್ದಾರೆ. ಸಿಎಂ ಜೊತೆ ಉಪ ಮುಖ್ಯಮಂತ್ರಿಗಳು, ಹತ್ತಕ್ಕೂ ಅಧಿಕ ಮಂತ್ರಿಗಳು, ಉಭಯ ಸದನಗಳ ಸಭಾಧ್ಯಕ್ಷರು, 40ಕ್ಕೂ ಅಧಿಕ ಶಾಸಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

50 ಸಾವಿರಕ್ಕೂ ಅಧಿಕ ಜನಸ್ತೋಮದ‌ ನಿರೀಕ್ಷೆ

ಧರ್ಮ ನೇಮೋತ್ಸವದ ದಿನದ ಕಾರ್ಯಕ್ರಮಕ್ಕೆ ತಾಲೂಕು ಸಹಿತ ಜಿಲ್ಲೆಯ ವಿವಿಧೆಡೆಯಿಂದ 50 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು ಸೂಕ್ತ ಸಿದ್ಧತೆಗಳನ್ನು ನಡೆಸಲಾಗಿದೆ.  ಒಡ್ಡೂರು ಗ್ರಾಮದ ಆಸುಪಾಸಿನ ಊರುಗಳಿಂದ ಹಾಗೂ ಬಂಟ್ವಾಳ ತಾಲೂಕಿನಿಂದ ಸುಮಾರು 3 ಸಾವಿರಕ್ಕೂ ಅಧಿಕ ಸ್ವಯಂ ಸೇವಕರನ್ನು‌ ನಿಯೋಜಿಸಲಾಗಿದ್ದು ಅನ್ನ ವಿತರಣೆ ಕಾರ್ಯಗಳು ಫೆ.24ರಿಂದಲೇ ಆರಂಭವಾಗಲಿದೆ ಎಂದರು.

ಶತಚಂಡಿಕಾಯಾಗ ಹಾಗೂ ಧರ್ಮನೇಮೋತ್ಸವದ ದಿನ ಒಡ್ಡೂರು ಧರ್ಮ ಚಾವಡಿಗೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನ ಹಾಗೂ  ಪೊಳಲಿ‌ ಸಮೀಪದ ಕೈಕಂಬದಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು‌ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಭಂಡಾರ ಮನೆಯ ನಿರ್ಮಾಣದ ಮೇಲುಸ್ತುವಾರಿ ಮುರಳೀಧರ  ಶೆಟ್ಟಿ, ಪ್ರಮುಖರಾದ ದೇವದಾಸ್ ಶೆಟ್ಟಿ, ಪ್ರಭಾಕರ ಪ್ರಭು, ಪುಷ್ಪರಾಜ ಚೌಟ, ಪುರುಷೋತ್ತಮ ಶೆಟ್ಟಿ, ಸದಾನಂದ ನಾವೂರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News