ಮಹಿಳೆಯ ಚಿನ್ನಾಭರಣ ಕಸಿದು ಪರಾರಿ

Update: 2020-02-22 15:02 GMT

ಮಂಗಳೂರು : ಮನೆಗೆ ದಾರಿ ಕೇಳುವ ನೆಪದಲ್ಲಿ ಅಪಚಿತ ವ್ಯಕ್ತಿಯೊಬ್ಬ ಮಹಿಳೆಯೋರ್ವರ ಕುತ್ತಿಗೆ ಮತ್ತು ಕಿವಿಯಿಂದ 45,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಸಿದು ಪರಾರಿಯಾದ ಘಟನೆ ಶುಕ್ರವಾರ ನಗರದ ದೇರೆಬೈಲ್ ಕೊಂಚಾಡಿಯಲ್ಲಿ ನಡೆದಿದೆ.

ಕೊಂಚಾಡಿಯ ಕಮಲ (63) ಚಿನ್ನಾಭರಣಗಳನ್ನು ಕಳೆದುಕೊಂಡವರು.

ಶುಕ್ರವಾರ ಕಮಲಾ ಅವರು ಕೊಂಚಾಡಿಯ ಅಂಗಡಿಯಿಂದ ಸಾಮಾನು ಖರೀದಿಸಿ ಮನೆ ಕಡೆಗೆ ಕೊಂಚಾಡಿ ಶಾಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ನಡೆದುಕೊಂಡು ಬಂದ ಸುಮಾರು 25- 30 ವರ್ಷ ವಯಸ್ಸಿನ ಯುವಕ ತುಳು ಭಾಷೆಯಲ್ಲಿ ‘ಕಾರ್ಪೆಂಟರ್‌ನ ಇಲ್ಲ್  ಓಲು’ (ಕಾಂರ್ಪೆಂಟರ್ ಮನೆ ಎಲ್ಲಿ?) ಎಂಬುದಾಗಿ ವಿಚಾರಿಸಿದ್ದಾನೆ. ‘ತನಗೆ ಗೊತ್ತಿಲ್ಲ’ ಎಂದು ಕಮಲಾ ಹೇಳುತ್ತಿದ್ದಂತೆ, ಅಪರಿಚಿತ ಯುವಕ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಕಿವಿಯಲ್ಲಿ ಧರಿಸಿದ್ದ ಬೆಂಡೋಲೆಗಳನ್ನು ಎಳೆದು ಪರಾರಿಯಾಗಿದ್ದಾನೆ. ಅಪರಿಚಿತ ಯುವಕ ಬೆಂಡೋಲೆಯನ್ನು ಎಳೆದ ರಭಸಕ್ಕೆ ಕಮಲ ಅವರ ಕಿವಿಗೆ ಗಾಯಗಳಾಗಿವೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಬೋಂದೆಲ್ ಸಮೀಪದ ಪದವಿನಂಗಡಿಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News