ಕದ್ರಿ ಪಾರ್ಕ್ ಬಳಿ ಬೆಂಕಿ ಅನಾಹುತ

Update: 2020-02-24 16:01 GMT

 ಮಂಗಳೂರು, ಫೆ.24: ನಗರದ ಕದ್ರಿ ಪಾರ್ಕ್ ಸಮೀಪ ಬೀದಿ ಬದಿಯಲ್ಲಿರುವ ಬೆತ್ತ, ಬಿದಿರು ಕುರ್ಚಿ ಮಾರಾಟದ ಅಂಗಡಿಯೊಂದಕ್ಕೆ ರವಿವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಅನಾಹುತವಾಗಿದೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗವು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.

ಆಗ್ರಾ ಮೂಲದ ವ್ಯಾಪಾರಿಯೊಬ್ಬರು ಬಿದಿರಿನ ಕುರ್ಚಿ ನಿರ್ಮಾಣದ ಅಂಗಡಿಯೊಂದನ್ನು ಕದ್ರಿಪಾರ್ಕ್ ಬಳಿ ತೆರೆದಿದ್ದರು. ರಾತ್ರಿ ಸುಮಾರು 12:30ರ ವೇಳೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಇದೇ ರಸ್ತೆಯಾಗಿ ದ್ದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದವರು ತಕ್ಷಣ ಅಗ್ನಿಶಾಮಕ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ. ಅದರಂತೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೂ ಕುರ್ಚಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ ಎನ್ನಲಾಗಿದೆ.

ರಸ್ತೆ ಬದಿಯಲ್ಲೇ ಡೇರೆ ಹಾಕಿ ವಸ್ತುಗಳನ್ನು ಮಾರಾಟ ಮಾಡುವುದಲ್ಲದೆ ಅಲ್ಲೇ ಅಡುಗೆ ಮಾಡುತ್ತಾ, ವಾಸ್ತವ್ಯ ಹೂಡುತ್ತಾರೆ. ಅಡುಗೆ ಮಾಡುವ ಸಂದರ್ಭ ಬೆಂಕಿ ಅನಾಹುತ ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಕದ್ರಿ ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಅಧಿಕಾರಿ ಅಬ್ದುಲ್ ಹಮೀದ್ ಮತ್ತು ಸಿಬ್ಬಂದಿ  ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News