ಜಾನಪದ ಅಕಾಡೆಮಿಗೆ ಹೆಚ್ಚಿನ ಅನುದಾನಕ್ಕೆ ಕೋರಿಕೆ: ಮಂಜಮ್ಮ ಜೋಗತಿ

Update: 2020-02-24 16:27 GMT

ಉಡುಪಿ, ಫೆ.24: ರಾಜ್ಯದಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ, ಕರ್ನಾಟಕ ಜಾನಪದ ಅಕಾಡೆಮಿಗೆ ಹೆಚ್ಚಿನ ಅನುದಾನವನ್ನು ಒದಗಿಸುವಂತೆ ರಾಜ್ಯ ಸರಕಾರವನ್ನು ಕೋರಲಾಗುವುದು ಎಂದು ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ ತಿಳಿಸಿದ್ದಾರೆ.

ಸೋಮವಾರ, ಅಲೆವೂರು ಪ್ರಗತಿ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಭಾಭವನದಲ್ಲಿ, ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ ಆಶ್ರಯದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ ಇವರ ಸಹಭಾಗಿತ್ವದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಾದ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ವಿವಿಧ ಜಾನಪದ ಪ್ರಕಾರಗಳ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮದಅ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಹಿಂದೆ ಕಲೆಗಳನ್ನು ಕಲಿಯಲು ಗುರುಗಳನ್ನು ಹುಡುಕಿಕೊಂಡು ಹೋಗಿ ಅವರಿಗೆ ಗುರುದಕ್ಷಿಣೆ ನೀಡಿ ಕಲಿಯಬೇಕಿತ್ತು. ಆದರೆ ಈಗ ಸರಕಾರವೇ ಗುರುಗಳನ್ನು ನೇಮಿಸಿ, ಅವರಿಗೆ ಗುರುದಕ್ಷಿಣೆ ನೀಡಿ, ಕಲಿಯುವ ಶಿಷ್ಯರಿಗೂ ಶಿಷ್ಯ ವೇತನ ನೀಡುತ್ತಿದೆ. ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಇಂದಿನ ಜನಾಂಗದ್ದಾಗಿದೆ ಎಂದರು.

ಆದ್ದರಿಂದ ರಾಜ್ಯದಲ್ಲಿ ಜಾನಪದ ಕಲೆಗಳನ್ನು ಬೆಳೆಸಲು, ರಾಜ್ಯಾದ್ಯಂತ ವಿವಿಧೆಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕಿದೆ. ಇದಕ್ಕಾಗಿ ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡುವಂತೆ ಸರಕಾರವನ್ನು ಕೋರಲಾಗುವುದು ಎಂದು ಮಂಜಮ್ಮ ಜೋಗತಿ ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಬೈಂದೂರಿನ ಮಹಾತ್ಮ ಜ್ಯೋತಿಬಾ ಪುಲೆ ಕಲಾ ವೇದಿಕೆ ಅಧ್ಯಕ್ಷ ವೈ. ಲಕ್ಷ್ಮಣ್ ಮಾತನಾಡಿ, ಹಿರಿಯರು ಉಳಿಸಿ ಬೆಳೆಸಿರುವ ವಿವಿಧ ಜಾನಪದ ಪ್ರಕಾರಗಳು ಈಗ ನಶಿಸಿ ಹೋಗುತ್ತಿವೆ. ಇವುಗಳನ್ನು ಉಳಿಸಿಕೊಳ್ಳುವ ತುರ್ತು ಅಗತ್ಯವಿದೆ. ಪ್ರತೀ ವ್ಯಕ್ತಿಗಳಲ್ಲಿ ಅಡಗಿರುವ ಪ್ರತಿಭೆ ಯನ್ನು ಗುರುತಿಸಿ, ಅವರಿಗೆ ವ್ಯವಸ್ಥಿತ ತರಬೇತಿ ನೀಡುವ ಮೂಲಕ ಮುಂದಿನ ಜನಾಂಗಕ್ಕೆ ಕೆಗಳನ್ನು ತಲುಪಿಸಬೇಕು ಎಂದರು.

ಉಡುಪಿ ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ. ವರದೇಶ್ ಹಿರೇಗಂಗೆ ಮಾತನಾಡಿ, ಕಾಡಿನಲ್ಲಿರುವ ಗಿರಿಜನರು ನಮ್ಮ ನಾಡಿನ ಆಸ್ತಿ. ಇವತ್ತು ಕಾಡುಗಳು ಉಳಿದಿರುವುದಕ್ಕೆ ಗಿರಿಜನರೇ ಕಾರಣ. ಇವರು ಕಾಡು ನಾಶ ಮಾಡುವುದಿಲ್ಲ. ಹಲವಾರು ಜಾನಪದ ಕಲಾಪ್ರಕಾರ ಗಳನ್ನು ಉಳಿಸಿಕೊಂಡು ಬಂದಿರುವ ಗಿರಿಜನರು ನಮ್ಮ ನಾಡಿನ ಸಂಪತ್ತು. ಜನಪದ ಕಲೆಗಳನ್ನು ಆಸಕ್ತಿಯಿಂದ, ಪ್ರೀತಿಯಿಂದ ನೋಡಿಕೊಳ್ಳದೇ ಹೋದರೆ ನಶಿಸಿ ಹೋಗುತ್ತವೆ. ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರವು ಕಳೆದ 25 ವರ್ಷಗಳಿಂದ ಹಲವು ಜಾನಪದ ಕಲೆಗಳ ದಾಖಲೀಕರಣಗೊಳಿಸುತ್ತಿದೆ ಎಂದು ಹೇಳಿದರು.

ಗಿರಿಜನ ಉಪಯೋಜನೆಯಡಿಯಲ್ಲಿ, ಪರಿಶಿಷ್ಟ ಪಂಗಡದ ಶಿಬಿರಾರ್ಥಿ ಗಳಿಗೆ ಫೆ.24ರಿಂದ ಐದು ದಿನಗಳ ಕಾಲ ನಡೆಯುವ ವಿವಿಧ ಜಾನಪದ ಪ್ರಕಾರಗಳ ತರಬೇತಿ ಶಿಬಿರದಲ್ಲಿ ಜಾನಪದ ಕಲೆಗಳಾದ ಕೊರಗರ ಡೋಲು, ಸಿದ್ಧಿ ಢಮಾಮಿ ನೃತ್ಯ, ಮಲ್ಲಕಂಬ, ಕಂಗೀಲು ನೃತ್ಯ, ಡೊಳ್ಳು ಕುಣಿತದ ತರಬೇತಿಯನ್ನು ನೀಡಲಾಗುವುದು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಗೌರವಾಧ್ಯಕ್ಷ ಯು. ವಿಶ್ವನಾಥ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಅಧ್ಯಕ್ಷ ಪ್ರೊ. ಶಂಕರ್ ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತಾ ಸ್ವಾಗತಿಸಿದರು. ಸಂಚಾಲಕ ರವಿರಾಜ್ ಹೆಚ್.ಪಿ.ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News