ಫೆ.27: ರಾಣಿ ಅಬ್ಬಕ್ಕ ವಿಚಾರ ಸಂಕಿರಣ; ಬಹುಭಾಷಾ ಕವಿಗೋಷ್ಠಿ
ಮಂಗಳೂರು, ಫೆ.24: ದ.ಕ. ಜಿಲ್ಲಾಡಳಿತ, ಜಿಪಂ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಜರಗುವ ‘ವೀರರಾಣಿ ಅಬ್ಬಕ್ಕ ಉತ್ಸವ-2020’ದ ಸಲುವಾಗಿ ಫೆ.27ರಂದು ರಾಣಿ ಅಬ್ಬಕ್ಕ ವಿಚಾರಗೋಷ್ಠಿ ಮತ್ತು ಬಹುಭಾಷಾ ಕವಿಗೋಷ್ಠಿಯು ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಲಾಗಿದೆ.
ಫೆ.27ರಂದು ಬೆಳಗ್ಗೆ 10:30ಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಚರಿತ್ರೆ ವಿಭಾಗ ಮುಖ್ಯಸ್ಥ ಡಾ.ಎಂ.ಕೊಟ್ರೇಶ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಅಪರಾಹ್ನ 2:30ಕ್ಕೆ ಬಹುಭಾಷಾ ಕವಿಗೋಷ್ಠಿ ಕವಯತ್ರಿ ಆರತಿ ಎಚ್.ಎನ್. ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕವಿಗಳಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸೋಮನಿಂಗ ಎಚ್.ಹಿಪ್ಪರಗಿ (ಕನ್ನಡ), ಅತ್ತಾವರ ಶಿವಾನಂದ ಕರ್ಕೇರ, ವಸಂತಿ ನಿಡ್ಲೆ (ತುಳು), ಫೆಲ್ಸಿ ಲೋಬೋ (ಕೊಂಕಣಿ), ಆಯೇಶಾ ಯು.ಕೆ. ಉಳ್ಳಾಲ (ಬ್ಯಾರಿ), ಡಾ.ಸುರೇಶ ನೆಗಳಗುಳಿ (ಹವ್ಯಕ), ಸುಮಿತ್ರಾ ಐತಾಳ್ (ಕುಂದ ಕನ್ನಡ) ಮತ್ತು ಪುದಿಯ ನೆರವನ ರೇವತಿ ರಮೇಶ್ (ಅರೆ ಭಾಷೆ) ಸ್ವರಚಿತ ಕವಿತೆಗಳನ್ನು ವಾಚಿಸುವರು.
ಸತೀಶ್ ಸುರತ್ಕಲ್ ಮತ್ತು ಬಳಗದವರು ಆ ಕವಿತೆಗಳನ್ನು ಸ್ವರ ಬದ್ಧಗೊಳಿಸಿ ಹಾಡುವರು. ಇದೇ ವೇಳೆ ಕುಂಚ ಕಲಾವಿದರಿಂದ ಚಿತ್ರ ಬಿಡಿಸುವ ಕಾರ್ಯಕ್ರಮವೂ ಇದೆ ಎಂದು ಪ್ರಕಟನೆ ತಿಳಿಸಿದೆ.